ಸಾರಾಂಶ
ಲೋಕಸಭಾ ಸಭಾ ಚುನಾವಣೆ ಹಿನ್ನೆಲೆ ಹೆಚ್ಚಿದ ಕುತೂಹಲ
ಕನ್ನಡಪ್ರಭ ವಾರ್ತೆ, ಶೃಂಗೇರಿಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹ ಹೆಸರು ಕೈಬಿಟ್ಟು ಮೈಸೂರು ಮಹಾರಾಜ ಯದುವೀರ್ ಕೃಷ್ಣ ದತ್ತ ಹೆಸರು ಚರ್ಚೆಗೆ ಬರುತ್ತಿರುವ ನಡುವೆಯೇ ಭಾನುವಾರ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆದಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಭಾನುವಾರ ಬೆಳಿಗ್ಗೆ ಮೈಸೂರು ಮಹಾರಾಜಾ ಯದುವೀರ್ ಕೃಷ್ಣದತ್ತ ಒಡೆಯರ್ ಶ್ರೀ ಶಾರದಾ ಪೀಠಕ್ಕೆ ಆಗಮಿಸಿ ಶ್ರೀ ಶಾರದಾಂಬಾ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಂಕರಾಚಾರ್ಯ ದೇವಾಲಯ, ಶ್ರೀ ತೋರಣ ಗಣಪತಿ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ಶ್ರೀ ಮಠದ ನರಸಿಂಹವನದಲ್ಲಿನ ಶ್ರೀ ಗುರುಭವನಕ್ಕೆ ತೆರಳಿ ಜಗದ್ಗುರುಗಳ ಭೇಟಿ ಮಾಡಿ ಆಶೀರ್ವಾದ ಪಡೆದರು. ಶ್ರೀ ಮಲಹಾನಿಕರೇಶ್ವರ ಸ್ವಾಮಿ ಮಹಾರಥೋತ್ಸವದಲ್ಲಿಯೂ ಪಾಲ್ಗೊಳ್ಳುವ ಮೂಲಕ ಜನರಲ್ಲಿ ಇನ್ನಷ್ಟು ಅಚ್ಚರಿ ಮೂಡಿಸಿದರು. ಪ್ರತಾಪ್ ಸಿಂಹ ಸ್ಪರ್ಧಿಸುತ್ತಿರುವ ಮೈಸೂರು ಕೊಡಗು ಕ್ಷೇತ್ರಕ್ಕೆ ಬಿಜೆಪಿ ವಲಯದಲ್ಲಿ ಟಿಕೇಟ್ ನೀಡುವ ವಿಚಾರದಲ್ಲಿ ಕಳೆದೆರೆಡು ದಿನಗಳಿಂದ ಯದುವೀರ್ ಹೆಸರು ಓಡಾಡುತ್ತಿದೆ. ಮೈಸೂರು ಸಂಸ್ಥಾನದ ಒಡೆಯರ್ ವಂಶಸ್ಥರು ಹಾಗೂ ಶೃಂಗೇರಿ ಸಂಸ್ಥಾನದ ನಡುವೆ ಅವಿನಾಭವ ಸಂಬಂಧವಿದೆ. ಯದುವೀರ್ ಅವರು ತಮ್ಮ ಪಟ್ಟಾಭಿಷೇಕೋತ್ಸವಕ್ಕೆ ಮೊದಲು ಯದುವೀರ್ ತಾಯಿ ಪ್ರಮೋದಾ ದೇವಿ ಒಡೆಯರ್ ರೊಂದಿಗೆ ಶೃಂಗೇರಿ ಪೀಠಕ್ಕೆ ಭೇಟಿ ನೀಡಿ ಶಾರದಾಂಬೆ ದರ್ಶನ, ಜಗದ್ಗುರುಗಳ ಆಶೀರ್ವಾದ ಪಡೆದು ಹೋಗಿದ್ದರು. ಇದೀಗ ಮತ್ತೆ ರಾಜಕೀಯ ವಲಯದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಓಡಾಡುತ್ತಿರುವ, ಮೈಸೂರು ಕೊಡಗು ಕ್ಷೇತ್ರದಿಂದ ಟಿಕೆಟ್ ಚರ್ಚೆ ಬೆನ್ನಲ್ಲೆ ಶೃಂಗೇರಿ ಭೇಟಿ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆ, ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.10 ಶ್ರೀ ಚಿತ್ರ 2-
ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭಾನುವಾರ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ ನೀಡಿದರು.