ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಬಿಡುಗಡೆ
ಮಂಗಳೂರು: ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಬಿಡುಗಡೆಗೊಂಡಿತು.ಕೃತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಬಿ.ಎ. ವಿವೇಕ ರೈ, ಗತಿಸಿದ ಕರಾವಳಿಯ ಹಿರಿಯ ಸಾಹಿತಿಗಳು, ಸಮಾಜ ಸುಧಾರಕರು, ಶಿಕ್ಷಕರು, ಕವಿಗಳು, ಸಂಶೋಧಕರ ಈ ಕೃತಿಯಲ್ಲಿ ಅವರ ಕವನಗಳನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಕಾವ್ಯ ಎನ್ನುವ ಜಗತ್ತು ನಮ್ಮನ್ನು ಮುನ್ನಡೆಸಿಕೊಂಡು ಸಾಗಬೇಕೆಂಬ ಸಂದೇಶವನ್ನು ಈ ಕೃತಿಯ ಮೂಲಕ ಸಾರಲಾಗಿದೆ ಎಂದು ಹೇಳಿದರು.
ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಮಾತನಾಡಿ, ತುಳು ಸಂಸ್ಕೃತಿ, ಭಾಷೆ, ನೆಲ, ಬದುಕು ಎಲ್ಲವನ್ನೂ ಸೇರಿಸಿ ಹೆಣೆಯುವ ಕೆಲಸವನ್ನು ಕರಾವಳಿಯ ಲೇಖಕರು ಗಂಭೀರವಾಗಿ ಮಾಡಿಕೊಂಡು ಬಂದಿದ್ದಾರೆ. ಬಹುತ್ವದಲ್ಲಿ ಏಕತೆ, ಭಾವೈಕ್ಯತೆ, ಚಿಂತನೆ, ಸಮಗ್ರತೆಯನ್ನು ಬೆಸೆಯುವ ಕಾರ್ಯ ಮಾಡಿದ್ದಾರೆ. ಇಂತಹ ಬಹುತ್ವವನ್ನು ಅವಲೋಕಿಸುತ್ತಾ ವಿಶ್ಲೇಷಿಸುವ ಕೆಲಸವನ್ನು ಪ್ರೊ.ವಿವೇಕ ರೈ ಮಾಡಿದ್ದಾರೆ ಎಂದರು.ಹಿರಿಯ ಸಾಹಿತಿಗಳಾದ ಚಂದ್ರಕಲಾ ನಂದಾವರ, ಡಾ.ನಾ. ದಾಮೋದರ ಶೆಟ್ಟಿ ಮಾತನಾಡಿದರು. ಆರಂಭದಲ್ಲಿ ಮೈಮ್ ರಾಮ್ದಾಸ್ ಅವರು ಕಡೆಂಗೋಡ್ಲು ಶಂಕರ ಭಟ್ಟರ ‘ಕನ್ನಡ ನಾಡಿನ ಕಾರ್ಗಾಲದ ವೈಭವವೇನು’ ಹಾಗೂ ಗೋಪಾಲ ಕೃಷ್ಣ ಅಡಿಗರ ‘ನಾವೆಲ್ಲರೂ ಒಂದೇ ಜಾತಿ ಒಂದೇ ಮತ, ಒಂದೇ ಕುಲ’ ಹಾಡಿನ ಮೂಲಕ ಕೃತಿ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿದರು. ಆಕೃತಿ ಆಶಯ ಪಬ್ಲಿಕೇಶನ್ನ ಕಲ್ಲೂರು ನಾಗೇಶ ಸ್ವಾಗತಿಸಿ, ನಿರೂಪಿಸಿದರು. ಕರಾವಳಿಯ ಹಿರಿಯ ಲೇಖಕರು, ಸಾಹಿತಿಗಳು ಈ ಸಂದರ್ಭ ಹಾಜರಿದ್ದರು.