ಚಂದ್ರಶೇಖರ ಪಾಟೀಲ್‌ಗೆ ಮತ ನೀಡಿ: ಬಿ.ಆರ್ ಪಾಟೀಲ

| Published : Jun 01 2024, 12:45 AM IST

ಸಾರಾಂಶ

ಎನ್‍ಪಿಎಸ್ ರದ್ದು, 7ನೇ ವೇತನ ಆಯೋಗ ಜಾರಿಗೆ ಸೇರಿದಂತೆ ಹಲವು ದಿಟ್ಟ ನಿರ್ಧಾರಗಳು ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಹೇಳಿದರು. ಆಳಂದದ ವಿವಿಧ ಕಾಲೇಜಿನಲ್ಲಿ ಕಾಂಗ್ರೆಸ್‌ ಆಭ್ಯರ್ಥಿ ಪರ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಆಳಂದ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಬಿ. ಪಾಟೀಲರನ್ನು ಪ್ರಾಶಸ್ತ್ರ್ಯದ ಹೆಚ್ಚಿನ ಮತಗಳನ್ನು ನೀಡಿ ಗೆಲಿಸಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಪದವೀಧರ ಮತದಾರರಲ್ಲಿ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜು, ಎಚ್‍ಕೆಇ ಪ್ರತಿಷ್ಠಿತ ಎ.ವಿ.ಪಾಟೀಲ ಪದವಿ ಮಹಾವಿದ್ಯಾಯ ಸೇರಿ ಇನ್ನಿತರ ಕಡೆ ಶುಕ್ರವಾರ ಪದವೀಧರ ಮತದಾರರ ಬಳಿ ತೆರಳಿದ ಅವರು ಸಭೆ ನಡೆಸಿ ಮತಯಾಚನೆ ನಡೆಸಿದರು.

ಈಶಾನ್ಯ ಕ್ಷೇತ್ರವು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಯಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಭಾಗವಾಗಿದೆ. ಪ್ರೊ. ಡಿ.ಎಂ.ನಂಜುಂಡಪ್ಪ ವರದಿಯು ಈ ಭಾಗದ ಹಿಂದುಳಿಯುವಿಕೆಗೆ ‘ಶಿಕ್ಷಣದ ಸೌಲಭ್ಯಗಳ ಕೊರತೆಯು ಮುಖ್ಯ ಕಾರಣವಾಗಿದೆ’ ಎಂದು ಗುರುತಿಸಿದೆ ಎಂದರು.

ರಾಜ್ಯದಲ್ಲಿ ಇನ್ನು 4 ವರ್ಷ ಕಾಂಗ್ರೆಸ್ ಸರ್ಕಾರದ ಆಡಳಿತ ಮುಂದುವರಿಯಲಿದೆ. ನುಡಿದಂತೆ ನಡೆದ ಈ ಸರ್ಕಾರವು ಅಧಿಕಾರಕ್ಕೆ ಬಂದು ಐದು ತಿಂಗಳುಗಳಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಅದರ ಲಾಭವನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಿದೆ. ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಪದವಿ ಹಾಗೂ ಡಿಪ್ಲೊಮಾ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಮಾಸಿಕ ರು. 3000 ಹಾಗೂ ಡಿಪ್ಲೊಮಾ ಮುಗಿಸಿದವರಿಗೆ ರು.1500 ನಿರುದ್ಯೋಗ ಭತ್ಯೆಯನ್ನು ಯುವ ನಿಧಿ ಕಾರ್ಯಕ್ರಮದಡಿ ಅನುಷ್ಠಾನಕ್ಕೆ ತಂದಿದೆ ಎಂದರು.

ಕಳೆದ 5 ತಿಂಗಳಲ್ಲಿ ರಾಜ್ಯದ ಲಕ್ಷಾಂತರ ಪದವೀಧರರು ನಿರುದ್ಯೋಗ ಭತ್ಯೆಯ ಲಾಭ ಪಡೆಯುತ್ತಿದ್ದಾರೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಎನ್‍ಪಿಎಸ್ ರದ್ದು ಹಾಗೂ 7ನೇ ವೇತನ ಆಯೋಗ ಜಾರಿ ಸೇರಿದಂತೆ ಹಲವು ದಿಟ್ಟ ನಿರ್ಧಾರಗಳು ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಮುಂತಾದ ಕ್ರಮಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ದೇಶಾದ್ಯಂತ 30 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬಲು ಮತ್ತು ಪ್ರತಿ ವಿದ್ಯಾವಂತ ಯುವಜನರಿಗೆ ವರ್ಷಕ್ಕೆ ಒಂದು ಲಕ್ಷ ವಿದ್ಯಾರ್ಥಿ ವೇತನವನ್ನು ನೀಡಲು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ‘ಪಂಚ ನ್ಯಾಯ’ದಡಿ ವಚನ ನೀಡಿದೆ. ಈ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ ಅವಕಾಶಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆಯಲು ಡಾ. ಚಂದ್ರಶೇಖರ ಬಿ. 6 ವರ್ಷದ ಅನುಭವವಿದೆ. ಅವರ ಜೊತೆಗೆ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಪರಿಣಾಮಕಾರಿ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಡಿಗ್ರಿ ಪ್ರಾಚಾರ್ಯ ರವಿಚಂದ್ರ ಕಂಟೆಕುರೆ, ಪಿಯು ಪ್ರಾಚಾರ್ಯ ಶಶಿಕಾಂತ ಮೇತ್ರೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಚ್ಛೇಂದ್ರ ಪಾಂಚಾಳ, ಮುಖಂಡ ಧರ್ಮರಾಜ ಸಾಹು, ಚನ್ನು ಕಾಳಕಿಂಗೆ, ವಿರೂಪಾಕ್ಷಯ್ಯಾ ಸ್ವಾಮಿ, ಶರಣಗೌಡ ಪಾಟೀಲ, ಪದವೀಧರ ಮತಬಾಂಧವರು ಉಪಸ್ಥಿತರಿದ್ದರು.

ಎಚ್‍ಕೆಇ ಡಿಗ್ರಿ ಕಾಲೇಜಿನಲ್ಲೂ ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಜೊತೆ ಶಾಸಕರು ಸಭೆ ನಡೆಸಿ ಮತಯಾಚನೆ ಮಾಡಿದರು.