ಸಾರಾಂಶ
ಶಿರಹಟ್ಟಿ:ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಜನರ ಸೇವೆ ಹಾಗೂ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಮನವಿ ಮಾಡಿದರು.
ಶನಿವಾರ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.ಸುಳ್ಳು ಭರವಸೆ ನೀಡುವ ಪಕ್ಷ ನಮ್ಮದಲ್ಲ. ಹೀಗಾಗಿ ಕಾಂಗ್ರೆಸ್ ಸಾಧನೆ ಮೆಚ್ಚಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡಿದ ೨೫ ಭರವಸೆಗಳನ್ನು ಈಡೇರಿಸುವ ಕೆಲಸ ಪಕ್ಷದ ವರಿಷ್ಠರು ಮಾಡಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉತ್ಸಾಹಿ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಏ. ೧೭ರಂದು ನಾಮಪತ್ರ ಸಲ್ಲಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕು. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ಆರ್ಥಿಕ ವಂಚನೆ ಮಾಡುತ್ತಿದ್ದರೂ ರಾಜ್ಯದಿಂದ ಆಯ್ಕೆಗೊಂಡ ೨೬ ಬಿಜೆಪಿ ಸಂಸದರು ಈ ಬಗ್ಗೆ ಲೋಕಸಭೆಯಲ್ಲಿ ಒಮ್ಮೆಯೂ ಧ್ವನಿ ಮಾಡದೇ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.ಮಾಜಿ ಶಾಸಕ ರಾಮಣ್ಣ ಲಮಾಣಿ, ಸುಜಾತ ದೊಡ್ಡಮನಿ ಮಾತನಾಡಿ, ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೋಮು-ಗಲಭೆಗೆ ಅವಕಾಶ ನೀಡದಂತೆ ಸುಭದ್ರ ಆಡಳಿತ ನೀಡುತ್ತಿದೆ ಎಂದರು.
ಮುಖಂಡರಾದ ಮಂಜುನಾಥ ಘಂಟಿ, ಡಿ.ಕೆ. ಹೊನ್ನಪ್ಪನವರ, ವಿ.ಜಿ. ಪಡಗೇರಿ, ಬುಡನಶ್ಯಾ ಮಕಾನದಾರ ಮಾತನಾಡಿದರು. ದೇವಪ್ಪ ಲಮಾಣಿ, ಮುರಗೇಶ ಆಲೂರ, ಆನಂದ ಕೋಳಿ, ಅಜ್ಜು ಪಾಟೀಲ, ಮಾಬೂಸಾಬ ಲಕ್ಷ್ಮೇಶ್ವರ, ಮಹಬೂಬ್ಸಾಬ ಮಾಚೇನಹಳ್ಳಿ, ಹಸರತ ಢಾಲಾಯತ, ಅನಿಲ ಮಾನೆ, ಈರಣ್ಣ ಕೋಟಿ, ಹೊನ್ನಪ್ಪ ಶಿರಹಟ್ಟಿ, ಎಂ.ಸಿ. ಹಿರೇಮಠ, ಮೈಲಾರೆಪ್ಪ ಹಾದಿನಮಿ ಸೇರಿ ಅನೇಕರು ಇದ್ದರು.