ಮತಗಳ್ಳತನ; ರಾಹುಲ್‌ ಗಾಂಧಿ ಆರೋಪ ಸುಳ್ಳು- ಜೋಶಿ

| Published : Aug 10 2025, 01:31 AM IST

ಮತಗಳ್ಳತನ; ರಾಹುಲ್‌ ಗಾಂಧಿ ಆರೋಪ ಸುಳ್ಳು- ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಮೂರನೇ ಭಾಷೆಯನ್ನಾಗಿ ಕಲಿಯಲಿ ಎಂದು ಹೇಳಿಲ್ಲ

ಹುಬ್ಬಳ್ಳಿ: ದೇಶದಲ್ಲಿ ತನ್ನದೇ ಆದ ಕಾನೂನು ಇದೆ. ಚುನಾವಣೆ ಜರುಗಿದ 14 ತಿಂಗಳ ಬಳಿಕ ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡುತ್ತಿರುವುದು ಬೋಗಸ್‌ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಕಾಂಗ್ರೆಸ್‌ ಆರೋಪ ನಿರಾಧಾರ. ರಾಹುಲ್‌ ಗಾಧಿ ಅಪ್ರಬುದ್ಧ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಭೂಕುಸಿತ ಮತ್ತು ಆನೆ ದಾಳಿಯಿಂದ ಮೃತ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಅದು ಪ್ರಿಯಾಂಕಾ ಗಾಂಧಿ ಲೋಕಸಭಾ ಕ್ಷೇತ್ರ. ಈ ಹಿಂದೆ ರಾಹುಲ್‌ ಗಾಂಧಿ ಕ್ಷೇತ್ರವಾಗಿತ್ತು. ಇದೀಗ ಅವರನ್ನು ಮೆಚ್ಚಿಸಲು ಕುರ್ಚಿ ಉಳಿಸಿಕೊಳ್ಳಲು ಸಿಎಂ-ಡಿಸಿಎಂ ಇಲ್ಲಿನ ಅನುದಾನ ಅಲ್ಲಿಗೆ ಕೊಡುತ್ತಿದ್ದಾರೆ. ಇಲ್ಲಿನ ಬಡವರಿಗೆ ಸಲ್ಲಬೇಕಾದ ಅನುದಾನ ಅಲ್ಲಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಆನೆ ದಾ‍ಳಿಯಾದರೆ ₹5 ಲಕ್ಷ ಪರಿಹಾರ ನೀಡುವ ರಾಜ್ಯ ಸರ್ಕಾರ, ಕೇರಳ ರಾಜ್ಯದಲ್ಲಿ ಕುಟುಂಬದ ಮೇಲೆ ದಾಳಿ ಮಾಡಿದ ಆನೆ ಕರ್ನಾಟಕದ್ದು ಎಂದು ಹೇ‍ಳಿ ₹15 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಾಳಿ ಮಾಡಿದ ಆನೆ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು.

ಇನ್ನು ಪರಿಶಿಷ್ಟ ಜಾತಿಗೆ ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ರಾಜ್ಯ ಸರ್ಕಾರದ ದ್ವಿಭಾಷಾ ನೀತಿ ಕುರಿತಂತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಮೂರನೇ ಭಾಷೆಯನ್ನಾಗಿ ಕಲಿಯಲಿ ಎಂದು ಹೇಳಿಲ್ಲ. ಆದರೆ, ಮಕ್ಕಳು ಮೂರು ಭಾಷೆ ಕಲಿಯಲಿ ಎಂಬುದು ನಮ್ಮ ಆಶಯ ಎಂದರು.