ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮತದಾರರ ಕರಡು ಹಾಗೂ ಅಂತಿಮ ಪಟ್ಟಿ ಪ್ರಕಟಿಸದೆ ಪಾರದರ್ಶಕವಾಗಿ ಚುನಾವಣೆ ನಡೆಸದೇ ಏಕಾಏಕಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಚುನಾವಣೆ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷರ ಸಂಘದ ತಾಲೂಕು ಮಾಜಿ ಉಪಾಧ್ಯಕ್ಷ ಟಿ.ಎಸ್.ಲಮಾಣೆ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಂಘದ ಚುನಾವಣೆಗೂ ಮುಂಚಿತವಾಗಿ ಕರಡು ಮತದಾರರ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಯ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ, ಅದ್ಯಾವುದನ್ನು ಮಾಡದೇ ತಮ್ಮ ಮನಬಂದಂತೆ ಮತದಾರರ ಪಟ್ಟಿ ಮುಚ್ಚಿಟ್ಟು ಚುನಾವಣೆ ನಡೆಸಲು ಮುಂದಾಗಿರುವುದು ಶಿಕ್ಷಕರಿಗೆ ನೋವುಂಟು ಮಾಡಿದೆ. ಏ.12ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಮತದಾರರ ಪಟ್ಟಿಯಿಲ್ಲದೇ ಚುನಾವಣೆ ನಡೆಸುವುದಾದರೆ ಹೇಗೆ ? ನಿಜಕ್ಕೂ ಇದೊಂದು ದುರಂತವೇ ಸರಿ ಎಂದು ಟಿ.ಎಸ್.ಲಮಾಣೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುಣಾವಣಾಧಿಕಾರಿ ನೇಮಿಸಿ, ಚುನಾವಣೆ ಕಚೇರಿಯೊಂದಿಗೆ ಪಾರದರ್ಶಕತೆಯಲ್ಲಿ ಚುನಾವಣೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಒಂದು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎ.ಡಿ.ಗೋನಾಳ, ಆರ್.ಕೆ.ಹಂಚಾಟೆ, ಅಶೋಕ ಸುಣದಳ್ಳಿ, ಬಿ.ಸಿ.ಗೋಗಿ, ಎಸ್.ಎನ್.ಕಾಂಬಳೆ, ಬಿ.ಐ.ಗಣಿಯಾರ, ಎಸ್.ಎಸ್.ತೀರ್ಥ ಇತತರಿದ್ದರು.ಕೋಟ್‌ ....


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಪಾರದರ್ಶಕವಾಗಿರಬೇಕು. ಆದರೆ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯೂ ಸಿಗುತ್ತಿಲ್ಲ. ಚುನಾವಣಾಧಿಕಾರಿ ಸಿಗುತ್ತಿಲ್ಲ. ಹೀಗಾಗಿ ಪೊಲೀಸ್‌ ಠಾಣೆಯ ಮೇಟ್ಟಿಲು ಹತ್ತಿ ದೂರು ದಾಖಲಿಸಿದ್ದೇವೆ.

। ಬಿ.ಐ.ಗಣಿಯಾರ ಶಿಕ್ಷಕರು

---------------

11ಟಿಎಲ್‌ಕೆ3: ತಾಳಿಕೋಟೆ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ತಾಳಿಕೋಟೆ ತಾಲೂಕು ಮಾಜಿ ಉಪಾಧ್ಯಕ್ಷ ಟಿ.ಎಸ್.ಲಮಾಣೆ ಮಾತನಾಡಿದರು.