ಮತದಾರ ಸದಾ ಸ್ವಯಂ ಜಾಗೃತನಾಗಿರಬೇಕು: ಅರುಣ್‌

| Published : Mar 14 2024, 02:04 AM IST

ಸಾರಾಂಶ

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಜಿಲ್ಲಾ ಮತದಾರರ ಜಾಗೃತ ವೇದಿಕೆ ವತಿಯಿಂದ ಚುನಾವಣೆ ಸುಧಾರಣೆ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಬದಲಾವಣೆಗೆ ಎಲ್ಲರೂ ಸಹಕರಿಸಬೇಕು. ಜನ ಬದಲಾದರೆ ಸಮಾಜ ಬದಲಾಗಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ಹೇಳಿದರು. ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಜಿಲ್ಲಾ ಮತದಾರರ ಜಾಗೃತ ವೇದಿಕೆ ಏರ್ಪಡಿಸಿದ್ದ ಚುನಾವಣೆ ಸುಧಾರಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿ, ಮತದಾನದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಮತದಾನ ಮಾಡಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಉತ್ತಮ ಆಡಳಿತ ಸಾಧ್ಯ ಎಂದು ತಿಳಿಸಿದರು.ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 93 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಜನ ಮತ ಹಾಕುವ ಮನಸ್ಸು ಮಾಡಬೇಕು, ಮತದಾನದ ದಿನ ಮನೆ ಬಿಟ್ಟು ಹೊರಬರದಿದ್ದರೆ ಏನು ಮಾಡಲು ಸಾಧ್ಯ? ಇಂತಹವರನ್ನು ಎಂದಿಗೂ ಜಾಗೃತಗೊಳಿಸಲಾಗದು. ಮತದಾರ ಸದಾ ಜಾಗೃತನಾಗಿರಬೇಕೇ ಹೊರತು ಆತನನ್ನು ಜಾಗೃತಗೊಳಿಸುವ ಕೆಲಸ ನಡೆಯಬಾರದು ಎಂದರು. ಆಯುಷ್ ವೈದ್ಯರಾದ ಡಾ.ರಂಜಿನಿ ಬಿದರಹಳ್ಳಿ ಮಾತನಾಡಿ, ಶಿವಮೊಗ್ಗ ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ಪಡೆದಿದೆ. ಆದರೆ, ಇಲ್ಲಿಯೇ ಮತದಾನ ಕಡಿಮೆಯಾಗುತ್ತಿದೆ. ಮತದಾನ ಜಾಗೃತಿ ಎನ್ನುವುದು ಮುಜುಗರ ತರುವ ಕೆಲಸವಾಗಿದೆ. ಮತದಾರ ಏಕೆ ಮತದಾನ ಮಾಡುವುದಿಲ್ಲ ಎನ್ನುವ ಪ್ರಶ್ನೆ ಸದಾ ಎದುರಾಗುತ್ತದೆ ಎಂದರು.ಸಹಕಾರ ಕ್ಷೇತ್ರದಲ್ಲಿ ಸಭೆಗೆ ಸತತ ಹಾಜರಾಗದಿದ್ದರೆ ಅಂತಹವರನ್ನು ನಿರ್ದೇಶಕ ಸ್ಥಾನದಿಂದ ಅಮಾನತು ಮಾಡುವ ಕಾಯ್ದೆ ಇದೆ. ಆ ಕಾಯ್ದೆ ಇಲ್ಲಿಯೂ ಜಾರಿಯಾಗಬೇಕಿದೆ. ಮತದಾನ ಮಾಡದವರಿಗೆ ಶಿಕ್ಷೆ ಕೊಡುವಂತಾ ಗಬೇಕು. ಅವರನ್ನು ಎಲ್ಲರೂ ಪ್ರಶ್ನಿಸಬೇಕು. ಇಲ್ಲಿಯವರೆಗೆ ಸತತ ಜಾಗೃತಿ ಮಾಡಿ ಸಾಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜಾಗೃತಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು. ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ರಾಜಕೀಯ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯು ವುದು, ಅವರ ಅಪವಿತ್ರ ಮೈತ್ರಿ, ತಳಬುಡವಿಲ್ಲದ ಸಿದ್ಧಾಂತಗಳು, ಅಪಮೌಲ್ಯಗೊಳಿಸಿದ ಆಡಳಿತ ಇವೆಲ್ಲವೂ ಮತದಾರರನನ್ನು ಭ್ರಮನಿರಸನಗೊಳಿಸಿವೆ. ಆದ ಕಾರಣ ಎಷ್ಟೋ ಮತದಾರರು ಬೇಸರಗೊಂಡು ಮತ ಹಾಕುತ್ತಿಲ್ಲ. ಹಳ್ಳಿಗಳಲ್ಲಿ ಜನರು ಸಂಪೂರ್ಣವಾಗಿ ಮತ ಚಲಾಯಿಸುತ್ತಾರೆ. ಆದರೆ, ನಗರ ಪ್ರದೇಶಗಳಲ್ಲಿ ಮತ ಹಾಕಲು ಬರುತ್ತಿಲ್ಲ. ಇದನ್ನು ಸರಿಪಡಿಸುವವರ್ಯಾರು ಎನ್ನುವ ಪ್ರಶ್ನೆ ಸದಾ ನಮ್ಮ ಎದುರಿದೆ ಎಂದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತರಾದ ಎಸ್‌.ಚಂದ್ರಕಾಂತ್‌ ಮಾತನಾಡಿದರು.ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಶೇಖರ್ ಗೌಳೇರ್ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಡಯಾಬಿಟಿಕ್ ತಜ್ಞ ಡಾ.ಪ್ರೀತಮ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಜಿ.ವಿಜಯಕುಮಾರ್, ಬಸವರಾಜ್ ಮತ್ತಿತರರು ಇದ್ದರು.