ಸಾರಾಂಶ
ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಬಾಪುಗೌಡ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಕಾಂಗ್ರೆಸ್ ಗೆಲುವಿನ ಹಿನ್ನೆಲೆ ನಗರದ ಬಸವೇಶ್ವರ ವೃತ್ತದಲ್ಲಿ ಹಾಗೂ ಸಮೀಪದ ಭೀಮರಾಯನಗುಡಿಯ ಬಾಪುಗೌಡ ವೃತ್ತದಲ್ಲಿ ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಂತಸ ವ್ಯಕ್ತಪಡಿಸಿ, ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಅಂತ್ಯಗೊಂಡಿದೆ. ಖುಷಿ ವಾತಾವರಣ ಸೃಷ್ಟಿಯಾಗಿದೆ. ನಮಗೆ ದ್ವೇಷ ಬೇಕಿಲ್ಲ. ಪ್ರೀತಿ ಬೇಕೆಂಬುದನ್ನು ಜನರಲ್ಲಿ ತಿಳಿಸಿರುವುದಾಗಿ ಕನ್ನಡಪ್ರಭದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಲ್ಯಾಣ ಕರ್ನಾಟಕದಲ್ಲಿ 371 (ಜೆ) ಕಲಂ ಜಾರಿ ಕರ್ನಾಟಕ ಸರ್ಕಾರದ ಜನಪ್ರಿಯ ಮತ್ತು ಭರವಸೆ ಅಧಿಕಾರದ ಮೇಲೆ ಜನತೆ ವಿಶ್ವಾಸ ಇಟ್ಟಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರು ಹುಮ್ಮಸ್ಸಿನಿಂದ ಕೆಲಸ ಮಾಡಿದ ಪರಿಣಾಮ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ ಎಂದರು.ಬಿಜೆಪಿ ತನ್ನ ಅಧಿಕಾರ ಅವಧಿಯಲ್ಲಿ ದೇಶದಲ್ಲಿ ರೈತ, ಕೂಲಿ ಕಾರ್ಮಿಕ ಹಾಗೂ ನಿರುದ್ಯೋಗಿ ಯುವಕರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳುವುದರ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಕೋಮುವಾದ ಹಿನ್ನೆಲೆ ಇಟ್ಟುಕೊಂಡು ಅಧಿಕಾರ ನಡೆಸಿದ ಬಿಜೆಪಿಯವರ ಬಣ್ಣ ದೇಶದ ಜನರ ಮುಂದೆ ಬಯಲಾಗಿದೆ. ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಈ ಚುನಾವಣೆಯಲ್ಲಿ ಮತದಾರರಿಗೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದ್ದಾರೆ.