ಮಂಗಳೂರು: ‘ಪ್ರಕೃತಿಯಿಂದ ಪ್ರೇರಣೆ. ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ’ ಎಂಬ ಜಾಗತಿಕ ಘೋಷವಾಕ್ಯದಡಿ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಬಂದರು ಆವರಣದಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮ ಆಯೋಜಿಸಲಾಯಿತು.ಎನ್ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಪೀಳಿಗೆಗಳಿಗೆ ಆರೋಗ್ಯಕರ ಮತ್ತುಹಸಿರು ಭವಿಷ್ಯವನ್ನು ಖಚಿತಪಡಿಸಲು ಪರಿಸರ ಸಂರಕ್ಷಣೆ ಅಗತ್ಯ. ಪರಿಸರ ಸಂರಕ್ಷಣೆ ಈಗ ಆಯ್ಕೆಯ ವಿಷಯವಲ್ಲ, ಅದು ಸಮಸ್ತ ಸಮಾಜದ ಸಮೂಹಿಕ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಮಾತನಾಡಿ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಸುಸ್ಥಿರ ತ್ಯಾಜ್ಯ ನಿರ್ವಹಣೆ ಹಾಗೂ ರಾಜ್ಯಾದ್ಯಂತ ಪರಿಸರಸ್ನೇಹಿ ಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯುಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ವಿವರಿಸಿದರು. ನವ ಮಂಗಳೂರು ಬಂದರು ಪ್ರಾಧಿಕಾರ ಕೈಗೊಂಡಿರುವ ಪರಿಸರ ಸ್ನೇಹಿ ಉಪಕ್ರಮಗಳನ್ನು, ವಿಶೇಷವಾಗಿ ವಿಶಾಲ ಹಸಿರು ವಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಮಾಲಿನ್ಯ ನಿಯಂತ್ರಣ ಕ್ರಮಗಳು, ಸೌರೀಕರಣ ಯೋಜನೆಗಳು ಹಾಗೂ ಬಂದರು ಆವರಣದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸುಸ್ಥಿರ ಪರಿಸರ ನಿರ್ವಹಣಾ ಕ್ರಮಗಳನ್ನು ಅವರು ಶ್ಲಾಘಿಸಿದರು.ಎನ್ಎಂಪಿಎ ಮುಖ್ಯ ಜಾಗೃತಿ ಅಧಿಕಾರಿ ಪದ್ಮನಾಭಾಚಾರ್ ಕೆ. ಮತ್ತಿತರರು ಇದ್ದರು.
ಎನ್ಎಂಪಿಎ ಮುಖ್ಯ ಅಭಿಯಂತರ (ಸಿವಿಲ್) ರವೀಂದ್ರ ರೆಡ್ಡಿ ಸ್ವಾಗತಿಸಿದರು. ಮುಖ್ಯ ಯಾಂತ್ರಿಕ ಅಭಿಯಂತರ ದೀಪಕ್ ರಾಥ್ ವಂದಿಸಿದರು.