ಕಡೂರುರಾಜ್ಯ ಸರ್ಕಾರ ಗುರುವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಡೂರು ತಾಲೂಕಿನ ವಿಳಾಸವೇ ಇಲ್ಲದಿರುವುದು ತಾಲೂಕಿನ ರೈತರಿಗೆ ನೋವು ತಂದಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ರಾಜ್ಯ ಸರ್ಕಾರ ಗುರುವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಡೂರು ತಾಲೂಕಿನ ವಿಳಾಸವೇ ಇಲ್ಲದಿರುವುದು ತಾಲೂಕಿನ ರೈತರಿಗೆ ನೋವು ತಂದಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ಗುರುವಾರ ಸಂಜೆ ಪಟ್ಟಣದ ಕೋಟೆ ನಿವಾಸದಲ್ಲಿ ನಡೆಸಿದ ಸುದ್ದಿಘೋಷ್ಠಿಯಲ್ಲಿ ಮಾತನಾಡಿ ಬರ ಅಧ್ಯಯನಕ್ಕೆ ಕಡೂರು ತಾಲೂಕಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ,ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ತಂಡವೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ತಾವು ಕಳೆದ 40 ದಿನಗಳಿಂದ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ರೈತಾಪಿ ವರ್ಗದವರ ಸಂಕಷ್ಟ,ಜಾನುವಾರುಗಳಿಗೆ ಮೇವಿಲ್ಲ,ಬಿತ್ತನೆಯಾಗದೆ ಬೆಳೆ ಇಲ್ಲ, ಕೆರೆಗಳಲ್ಲಿ ನೀರಿಲ್ಲ ಕುಕ್ಕಸಮುದ್ರ ಕೆರೆಗೆ ನೀರು ಹರಿಸಲು ಇಲಾಖೆಗೆ ಒತ್ತಾಯ ಮಾಡಿದ್ದು ಇಂದಿನಿಂದ ಪಾದ ಯಾತ್ರೆಗೆ ಸಿದ್ದತೆ ನಡೆಸಲು ಸಿದ್ದವಾಗಿದ್ದೆವು. ಆದರೆ ಸರ್ಕಾರ 2020ರ ಮಾನದಂಡ ಇಟ್ಟುಕೊಂಡು ಜಿಲ್ಲೆಯ ತೀವ್ರ ಬರ ತಾಲೂಕು ಎಂದು ಅಜ್ಜಂಪುರವನ್ನು ಸಾಧಾರಣ ಬರಕ್ಕೆ ತುತ್ತಾಗಿರುವ ತಾಲೂಕುಗಳೆಂದು ತರೀಕೆರೆ, ಎನ್.ಆರ್.ಪುರ ಮತ್ತು ಕೊಪ್ಪ ತಾಲೂಕುಗಳನ್ನು ಘೋಷಿಸಿದೆ. ಆದರೆ ಕಡೂರು ತಾಲೂಕಿನ ಅಡ್ರೆಸ್ ಇಲ್ಲದಿರುವುದು ನಮಗೂ ಹಾಗೂ ರೈತರಿಗೂ ತುಂಬ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಕಲ್ಕೆರೆ ಗ್ರಾಮದಿಂದ ಪಾದಯಾತ್ರೆ ಆರಂಭ ವಾಗಲಿದೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

ನನ್ನ ಕಹಿ ಅನುಭವದ ಮೇಲೆ ಕಡೂರು ಸೇರುತ್ತೋ ಇಲ್ಲವೋ ಎಂಬ ಆತಂಕ ಕಾಡುತ್ತಿತ್ತು. ನನ್ನ ಉದ್ದೇಶ ಜನರಲ್ಲಿ ಆತಂಕ ಸೃಷ್ಠಿಸುವುದಲ್ಲ ಜನರಿಗೆ ನ್ಯಾಯ ಕೊಡಿಸುವುದು. ಹಿಂದಿನಿಂದಲೂ ಕಾಡಿ ಬೇಡಿ ಹೋರಾಟ ಮಾಡಿದ್ದನ್ನು ಜ್ಞಾಪಿಸಿದ ಅವರು ಜಿಲ್ಲಾಡಳಿತಕ್ಕೆ ಒತ್ತಡ ತರಲು ಪಾದಯಾತ್ರೆಗೆ ಮುಂದಾಗಿದ್ದು ನೋವಿಗೆ ಒಳಗಾಗಿರುವ ರೈತರ ಪರವಾಗಿ ರೈತರನ್ನು ಕೈ ಬಿಡಬೇಡಿ ಎಂದು ಆಡಳಿತಕ್ಕೆ ಬಿಸಿಮುಟ್ಟಿಸಲು ಪಕ್ಷಾತೀತ ಹೋರಾಡಬೇಕಾಗಿದೆ ಎಂದರು.

ರಾಜ್ಯ ಸರ್ಕಾರ 101 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ 89 ತೀವ್ರ ಬರಗಾಲಕ್ಕೆ ತುತ್ತಾಗಿವೆ. 12 ಸಾಧಾರಣ ಬರಕ್ಕೆ ತುತ್ತಾಗಿವೆ ಎಂದು ವಿಂಗಡಿಸಿದೆ. ಈ ಯಾವ ಪಟ್ಟಿಯಲ್ಲೂ ಕಡೂರು ಸೇರಿಲ್ಲ, ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. 2ನೇ ಪಟ್ಟಿಯಲ್ಲಿ ಕಡೂರನ್ನು ಸೇರಿಸಬೇಕು. ರೈತ ಬದುಕಿನ ಪ್ರಶ್ನೆ ಎಂದು ಅರ್ಥ ಮಾಡಿಕೊಂಡು ಸರ್ಕಾರ, ಆಡಳಿತ ಇಲಾಖೆಗಳು ತೋರುತ್ತಿರುವ ನಿರ್ಲಕ್ಷದ ವಿರುದ್ಧ ಒತ್ತಡ ತರಲು ಪಾದಯಾತ್ರೆಗೆ ಚಾಲನೆ ನೀಡಲಿದ್ದೇವೆ ಎಂದರು.

ಎನ್ಆರ್ ಪುರ ಸೇರ್ಪಡೆಗೆ ನಮ್ಮ ವಿರೋಧವಿಲ್ಲ. ಅದರೆ ಎನ್ಆರ್ ಪುರಕ್ಕಿಂತ ಕಡೂರು ಕ್ಷೇತ್ರ ಸುಭಿಕ್ಷವಾಗಿದೆಯೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಟಿ.ಗಂಗಾಧರನಾಯ್ಕ, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಪ್ರೇಮಕುಮಾರ್ ಇದ್ದರು.

27ಕೆಕೆಡಿಯು3.

ವೈ.ಎಸ್.ವಿ ದತ್ತ.