ಸಾರಾಂಶ
ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ರೈತ ಸಂಘಟನೆಗಳ ಸಹಯೋಗದೊಂದಿಗೆ ಸವದತ್ತಿ ಪಟ್ಟಣ ಎಪಿಎಂಸಿ ವೃತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಕನ್ನಡಪ್ರಭ ವಾರ್ತೆ ಸವದತ್ತಿ
ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ರೈತ ಸಂಘಟನೆಗಳ ಸಹಯೋಗದೊಂದಿಗೆ ಪಟ್ಟಣ ಎಪಿಎಂಸಿ ವೃತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.ಈ ವೇಳೆ ಶಿಂಧೋಗಿಯ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ರೈತರ ಜಮೀನು, ದೇವಾಲಯ ಮತ್ತು ಮಠಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವುದು ಖಂಡನಾರ್ಹ. ಹಿಂದುಗಳು ಸಂಘಟಿತರಾಗದೆ ಹೋದಲ್ಲಿ ಮುಂದಿನ ದಿನಗಳು ಅತ್ಯಂತ ಘೋರವಾಗಿರುವುದರಲ್ಲಿ ಸಂದೇಹವಿಲ್ಲ. ಸರ್ಕಾರವು ತಕ್ಷಣ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ ಮಾತನಾಡಿ, ಹಿಂದೂ ರುದ್ರಭೂಮಿ ಮತ್ತು ಸರ್ಕಾರಿ ಜಮೀನುಗಳನ್ನು ಸಹ ವಕ್ಫ್ ಬೋರ್ಡ್ ಕಬಳಿಸಿದ್ದು, ಇದನ್ನು ವಿರೋಧಿಸದೆ ಹೋದಲ್ಲಿ ನಮ್ಮೆಲ್ಲರ ಆಸ್ತಿಗಳು ಮುಂದೊಂದು ದಿನ ನಮ್ಮನ್ನು ಕೈಬಿಟ್ಟು ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಹೋರಾಟದ ಮೂಲಕ ಈ ವಕ್ಫ್ ನೀತಿಯನ್ನು ತೆಗೆದು ಹಾಕಬೇಕಿದೆ ಎಂದರು.
ಎಪಿಎಮ್ಸಿ ಹತ್ತಿರ ನಡೆದ ರಸ್ತೆ ತಡೆಯಿಂದ ಸಾರಿಗೆ ಸಂಚಾರಕ್ಕೆ ಹಲವು ಗಂಟೆಗಳ ಕಾಲ ತೊಂದರೆಯಾಯಿತು. ಚಿಕ್ಕುಂಬಿಯ ಶ್ರೀ ಅಜಾತ ನಾಗಲಿಂಗ ಸ್ವಾಮೀಜಿ, ಶಂಕರ ವಣ್ಣೂರ, ಶಿವಾನಂದ ಸರದಾರ ರೈತ ಪರ ಸಂಘಟನೆಗಳು ಹಾಗೂ ಸ್ಥಳೀಯ ಮುಖಂಡರು, ಹಿರಿಯರು, ಯುವಕರು ಹಾಗೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.