ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ವಕ್ಫ್ ನೋಟಿಸ್ ಬಂದಿರುವುದು ಈಗಲ್ಲ, 2021ರಲ್ಲಿಯೇ ಬಂದಿವೆ. ಆಗ ಬಿಜೆಪಿ ಆಡಳಿತದಲ್ಲಿತ್ತು. ಈಗ ಬಿಜೆಪಿಯವರು ಬಾಯಿ ಬಾಯಿ ಬಡಿದುಕೊಳ್ಳುತ್ತಿರುವುದು ಯಾಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಕ್ಫ್ ವಿವಾದ ಹುಟ್ಟು ಹಾಕಿದ್ದಾರೆ. ತಮ್ಮ ಸರ್ಕಾರ ಇದ್ದಾಗ ನೋಟಿಸ್ ಜಾರಿಯಾಗಿದ್ದರೂ ತುಟಿ ಪಿಟಕ್ ಅನ್ನದ ಬಿಜೆಪಿ ನಾಯಕರು ಈಗ ಎದ್ದು ಕುಳಿತಿದ್ದಾರೆ. ಉಪ ಚುನಾವಣೆ ಬಂದಿರುವುದರಿಂದಲೇ ವಕ್ಫ್ ವಿಷಯವನ್ನು ಬಿಜೆಪಿ ನಾಯಕರು ಕೈಗೆತ್ತಿಕೊಂಡಿದ್ದಾರೆ ಎಂದರು.
ವಕ್ಫ್ ಆಸ್ತಿಯ ಕುರಿತು ಸಮಸ್ಯೆಯಾಗಿರುವುದು ಈಗಲ್ಲ ಎನ್ನುವುದು ಗೊತ್ತಿದ್ದರು ಸಹ ಬಿಜೆಪಿ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೂ ನಮ್ಮ ಸರ್ಕಾರ ವಕ್ಫ್ ಆಸ್ತಿಯ ವಿವಾದವನ್ನು ಬಗೆಹರಿಸುವುದಕ್ಕೆ ಬದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ. ರೈತರ ಪಹಣಿಯಲ್ಲಿ ವಕ್ಫ್ ಎನ್ನುವ ಹೆಸರು ಬಂದಾಕ್ಷಣ ಭಯಬೇಡ. ಇದನ್ನು ಈಗಾಗಲೇ ಸರಿ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ, ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಸಹ ಖುದ್ದು ಈ ಕುರಿತು ಉತ್ತರ ನೀಡಿದ್ದಾರೆ ಎಂದರು.ರೈತರ ಪಹಣಿಯಲ್ಲಿ ವಕ್ಫ್ ಎನ್ನುವ ಹೆಸರು ಬಂದಿದ್ದನ್ನು ತೆಗೆಯುವ ಕುರಿತು ಬರುವ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ರೈತರು ತಾಳ್ಮೆಯಿಂದ ಇರಬೇಕು ಎಂದರು.
ಬಿಜೆಪಿಯವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದೇ ಆದರೆ ಸದನದಲ್ಲಿ ಚರ್ಚೆ ಮಾಡಲಿ, ಆಗ ನಾವು ಉತ್ತರ ನೀಡುತ್ತೇವೆ. ಅದನ್ನು ಬಿಟ್ಟು ಈ ರೀತಿಯಾಗಿ ಸಾರ್ವಜನಿಕವಾಗಿ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದರು.ಒಳ ಮೀಸಲಾತಿಯ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ಈಗಿರುವ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರವೇ ತಿರಸ್ಕಾರ ಮಾಡಿದೆ. ಹೀಗಾಗಿಯೇ ನಿಖರ ಅಂಕಿ-ಅಂಶಗಳ ಸಂಗ್ರಹಣೆ ಅಗತ್ಯವಾಗಿದ್ದು, ಅದರ ಜಾರಿಗೆ ಬದ್ಧವಾಗಿರುವುದಾಗಿ ಹೇಳಿದರು.
ಒಳ ಮೀಸಲಾತಿಯನ್ನು ಆ ಜಾತಿಯ ವ್ಯಾಪ್ತಿಯಲ್ಲಿ ಬರುವ 101 ಜಾತಿಯವರು ಬೆಂಬಲಿಸಿದ್ದೇವೆ. ಆದರೆ, ಅದು ವೈಜ್ಞಾನಿಕವಾಗಿ ಆಗಬೇಕಾಗಿದೆ. ಹೀಗಾಗಿ, ನಿಖರ ಅಂಕಿ-ಸಂಖ್ಯೆಯನ್ನು ಆಯೋಗ ಸಂಗ್ರಹ ಮಾಡಲಿದೆ. ಅಷ್ಟೇ ಅಲ್ಲ, 2011ರ ಜನಗಣತಿಯ ನಂತರ ಗಣತಿಯೇ ಆಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ವೈಜ್ಞಾನಿಕವಾಗಿ ಮಾಡಲಾಗುತ್ತದೆ ಎಂದರು.ಯಾವ ಗ್ಯಾರಂಟಿಗಳು ಸಹ ಸ್ಥಗಿತವಾಗುವುದಿಲ್ಲ, ಈಗಾಗಲೇ ಖುದ್ದು ಸಿಎಂ ಅವರೇ ಸ್ವಷ್ಟಪಡಿಸಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೆ ಹೇಳಿಯೇ ಇರಲಿಲ್ಲ, ಮಾಧ್ಯಮದಲ್ಲಿ ತಿರುಚಿ ಬಂದಿದೆ. ಅದನ್ನು ಡಿಸಿಎಂ ಸ್ಪಷ್ಟಪಡಿಸಿದ್ದಾರೆ ಎಂದರು.
ಗ್ಯಾರಂಟಿಗಳು ಪಂಕ್ಚರ್ ಆಗುವುದಿಲ್ಲ, ಮಾಜಿ ಸಚಿವ ಸಿ.ಟಿ. ರವಿ ಅವರೇ ಪಂಕ್ಚರ್ ಆಗಿದ್ದಾರೆ ಎಂದು ಸಿ.ಟಿ. ರವಿಗೆ ಟಾಂಗ್ ನೀಡಿದರು.ತಾಯಿ ಭುವನೇಶ್ವರಿ ದೇವಿಯ ಮೂರ್ತಿ ನಿರ್ಮಾಣ ಹೊಣೆಯನ್ನು ದೆಹಲಿ ಮೂಲದವರಿಗೆ ಕೊಟ್ಟಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ, ಸೂಕ್ತವಾಗಿರುವುದನ್ನು ಪರಿಗಣಿಸಿಯೇ ನೀಡಲಾಗಿದೆ. ನವೆಂಬರ್ ತಿಂಗಳಲ್ಲಿಯೇ ಬರಬೇಕಾಗಿತ್ತು. ಅದಿನ್ನು ಪೂರ್ಣಗೊಂಡಿಲ್ಲ, ಹೀಗಾಗಿ, ಒಂದಷ್ಟು ಸಮಯಬೇಕಾಗುತ್ತದೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್ ಇದ್ದರು.