ಸಾರಾಂಶ
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು ಪರಿಶಿಷ್ಟ ಜಾತಿ ಆದಿ ದ್ರಾವಿಡ ತುಳು ಭಾಷಿಕರು ಎದುರಿಸುತ್ತಿರುವ ಜಾತಿ ದೃಢೀಕರಣ ಪತ್ರದ ಸಮಸ್ಯೆ ಕುರಿತು ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಾತಿ ಗಣತಿ ಸಮೀಕ್ಷೆಯ ಸಂದರ್ಭ ಆದಿ ದ್ರಾವಿಡ ಸಮುದಾಯದವರನ್ನು ಪರಿಶಿಷ್ಟ ಜಾತಿ ಆದಿ ದ್ರಾವಿಡ ತುಳು ಭಾಷಿಕರು ಎಂದು ನಮೂದಿಸಬೇಕು. ಸಮೀಕ್ಷಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ರಾಜ್ಯದಲ್ಲಿರುವ 12 ಲಕ್ಷದಷ್ಟು ಆದಿದ್ರಾವಿಡ ಸಮುದಾಯದವರು ಜಾತಿ ಗಣತಿಯನ್ನು ಬಹಿಷ್ಕರಿಸಲಿದ್ದಾರೆ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘ ಎಚ್ಚರಿಕೆ ನೀಡಿದೆ.ಸಂಘದ ರಾಜ್ಯಾಧ್ಯಕ್ಷ ಎಚ್. ಎಂ. ಸೋಮಪ್ಪ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು, ಪರಿಶಿಷ್ಟ ಜಾತಿ ಆದಿ ದ್ರಾವಿಡ ತುಳು ಭಾಷಿಕರು ಎದುರಿಸುತ್ತಿರುವ ಜಾತಿ ದೃಢೀಕರಣ ಪತ್ರದ ಸಮಸ್ಯೆಯ ಕುರಿತು ಗಮನ ಸೆಳೆದರು.
ಮೀಸಲಾತಿ, ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ವಿಶೇಷ ಜಾತಿಗಣತಿ ನಡೆಯುತ್ತಿದ್ದು, ಪರಿಶಿಷ್ಟ ಜಾತಿಯಲ್ಲಿನ 101 ಉಪಜಾತಿಗಳ ಪಟ್ಟಿಯಲ್ಲಿ ವಿಶೇಷವಾಗಿ ಆದಿ ದ್ರಾವಿಡ/ ಆದಿ ಕರ್ನಾಟಕ/ ಆದಿ ಆಂಧ್ರ ಇವುಗಳು 1950ರಲ್ಲಿ ಅಧಿಕೃತವಾಗಿ ಅಧಿಸೂಚನೆಗೊಂಡ ಉಪ ಜಾತಿಗಳು. ಈ ಜಾತಿ ಪ್ರಮಾಣಪತ್ರವನ್ನು ಅಧಿಕೃತವಾಗಿ ಪಡೆದಿರುವುದಕ್ಕೆ 75 ವರ್ಷಗಳ ಇತಿಹಾಸವಿದೆ. ಒಂದು ಜಾತಿಯನ್ನು ಸೃಷ್ಟಿ ಮಾಡುವ ಅಥವಾ ನಿಷೇಧಿಸುವ ಅಧಿಕಾರವಿರುವುದು ಸಂವಿಧಾನ ಬದ್ಧವಾಗಿ ರಾಷ್ಟ್ರಪತಿಗಳಿಗೆ ಮಾತ್ರ.ಈ ಬಾರಿಯ ಜಾತಿ ಗಣತಿಯ ಸಂದರ್ಭ ಆದಿದ್ರಾವಿಡ/ಆದಿ ಕರ್ನಾಟಕ/ಆದಿ ಆಂಧ್ರ ಇವುಗಳಲ್ಲಿ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲದಿದ್ದಲ್ಲಿ ಮೀಸಲಾತಿಯಡಿ ಕುಟುಂಬವನ್ನು ಕೈಬಿಡಲಾಗುವುದು ಎಂದು ಆಯೋಗ ತಿಳಿಸಿದೆ.
ಆದಿ ದ್ರಾವಿಡ ಬರೆದು ಈ 98 ಜಾತಿಯಲ್ಲಿ ಯಾವುದಾದರೂ ಒಂದನ್ನು ನಮೂದಿಸಿದರೆ ಅವರು ಉಪ ಜಾತಿಗೆ ಸಂಬಂಧಪಟ್ಟವರು ಎಂದು ಪರಿಗಣಿಸಲಾಗುವುದು. ಹಾಗಿರುವಾಗ ನಾವು ಮೂಲತಃ ಆದಿ ದ್ರಾವಿಡ ತುಳು ಭಾಷಿಕರು ಆಗಿರುವುದರಿಂದ ಸಮೀಕ್ಷೆ ಕಾರ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಆದಿ ದ್ರಾವಿಡ ಉಪ ಜಾತಿ (ತುಳು ಭಾಷಿಕರು) ಎಂದು ಮಾಹಿತಿ ನೀಡಬೇಕು ಮತ್ತು ಇದನ್ನು ಯಥಾವತ್ತಾಗಿ ದಾಖಲಿಸಬೇಕು. ಇದಲ್ಲದೆ ಬೇರೆ ಯಾವುದೇ ಇಲ್ಲದ ವಿಚಾರವನ್ನು ದಾಖಲು ಮಾಡಬಾರದೆಂದು ಹೆಚ್.ಎಂ.ಸೋಮಪ್ಪ ಮನವಿ ಮಾಡಿದರು.ಪರಿಶಿಷ್ಟ ಜಾತಿ ಆದಿ ದ್ರಾವಿಡ ತುಳು ಭಾಷಿಕರು ಎಂದು ನಮೂದಿಸದೆ ಇದ್ದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಅವಿಭಾಜ್ಯ ಉಡುಪಿ, ಮಲೆನಾಡು ಜಿಲ್ಲೆಗಳಲ್ಲಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚದುರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸುಮಾರು 12 ಲಕ್ಷದಷ್ಟು ಆದಿದ್ರಾವಿಡ ಸಮುದಾಯದವರು ಅವೈಜ್ಞಾನಿಕ ಜಾತಿ ಗಣತಿ ಸಮೀಕ್ಷಾ ಕಾರ್ಯವನ್ನು ಬಹಿಷ್ಕರಿಸಲಿದ್ದಾರೆ ಎಂದರು.
ಮನವಿ ಸಲ್ಲಿಸುವ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಪಿ.ಎಲ್.ಸುರೇಶ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಧು, ಸದಸ್ಯರಾದ ಎ.ಉಮೇಶ್ ಮಾದಾಪುರ, ಹೆಚ್.ಎಸ್.ಮನು, ರವಿ ಹೊನ್ನವಳ್ಳಿ, ಕುಮಾರ ಬಿಟಿಕಟ್ಟೆ ಮತ್ತಿತರರು ಹಾಜರಿದ್ದರು.