ಸಾರಾಂಶ
-ಅಕ್ರಮ ಮದ್ಯ ಮಾರಾಟ: ತಾಕೀತು ಮಾಡಿದ ಅಧಿಕಾರಿಗಳ ತಂಡಕ್ಕೇ ಧಮ್ಕಿ ಹಾಕಿದ ಘಟನೆ
----ಕನ್ನಡಪ್ರಭ ವಾರ್ತೆ ಸಿರಿಗೆರೆಲಕ್ಷ್ಮೀಸಾಗರ ಮತ್ತು ವಿಜಾಪುರ ಗೊಲ್ಲರಹಟ್ಟಿಯಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಜಿಲ್ಲಾ ಅಬಕಾರಿ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ಹೋರಾಟ ನಡೆಸಲಾಗುವುದೆಂದು ಮಹಿಳಾ ಒಕ್ಕೂಟ ಎಚ್ಚರಿಕೆ ನೀಡಿದೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಕೂಡದೆಂದು ತಾಕೀತು ಮಾಡಿದ ಅಧಿಕಾರಿಗಳ ತಂಡಕ್ಕೇ ಧಮ್ಕಿ ಹಾಕಿದ ಘಟನೆ ಬಳಿಕ ಮಹಿಳೆಯರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಗ್ರಾಮಗಳಲ್ಲಿ ಕೆಲವರು ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಇದು ಗ್ರಾಮದ ಯುವಕರು ಮತ್ತು ಗ್ರಾಮಸ್ಥರ ಮೇಲೆ ಪರಿಣಾಮ ಬೀರುತ್ತಿದೆ. ಸ್ಥಳೀಯರು ಮಧ್ಯ ಪ್ರವೇಶ ಮಾಡಿ, ಅಕ್ರಮ ಮಾರಾಟ ನಿಲ್ಲಿಸಬೇಕೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈಗಾಗಲೇ ಒಂದು ತಿಂಗಳ ಹಿಂದೆ ಅಕ್ರಮ ಮದ್ಯ ಮಾರಾಟ ಮಾಡುವವರ ಮನ ಒಲಿಸಿ ಈ ದಂಧೆ ಕೈಬಿಡಬೇಕೆಂದು ಮನವಿ ಮಾಡಲಾಗಿತ್ತು.ಈಗ ಮತ್ತೆ ಅಕ್ರಮ ಮಾರಾಟದಲ್ಲಿ ತೊಡಗಿದ್ದರಿಂದ ಹಲವು ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳಿಗೆ ಮತ್ತೆ ಮನವಿ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಆಚರಣೆ ಮುಗಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳ ಬೀದಿಯಲ್ಲಿ ಸಂಚರಿಸಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕೆಂದು ಸೂಚಿಸಿದರು.ಮದ್ಯ ಮಾರಾಟ ನಿಲ್ಲಿಸಬೇಕೆನ್ನುವವರು ಮೊದಲು ತಾವು ಕುಡಿಯುವುದನ್ನು ಬಿಡಲಿ ಎಂದು ಅಧಿಕಾರಿಗಳಿಗೇ ತಿರುಗೇಟು ನೀಡಿದರು.
ಕಳಪೆ ಮದ್ಯ ಮಾರಾಟ ಗ್ರಾಮಗಳಲ್ಲಿ ಅವ್ಯಾಹತ ನಡೆಯುತ್ತಿದೆ. ಇದರಿಂದ ಗ್ರಾಮದ ಜನರ ಆರೋಗ್ಯ ಕೆಡುತ್ತಿದೆ. ಜನರ ದುಡಿಮೆ ಹಣ ಮದ್ಯಕ್ಕೆ ವ್ಯಯವಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ. ಇವರು ಜಾಗೃತರಾಗಿ ವಾರದಲ್ಲಿ ಒಂದೆರಡು ದಿನ ಅಕ್ರಮ ಮಾರಾಟಗಾರರ ಮನೆಗಳನ್ನು ಜಪ್ತಿ ಮಾಡಬೇಕು. ಇದರಿಂದ, ಈ ಅಕ್ರಮವನ್ನು ತಡೆಗಟ್ಟಬಹುದು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಗ್ರಾಪಂ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಉಪಾಧ್ಯಕ್ಷೆ ಸುನಿತಾ ನಾಗರಾಜ್, ಪಿಡಿಒ ಜಯಶೀಲಾ, ಗ್ರಾಪಂ ಸದಸ್ಯರಾದ ಎ.ಬಿ. ಧನಂಜಯ, ಕವಿತಾ ತಿಪ್ಪೇಸ್ವಾಮಿ, ಎಚ್. ಸುರೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
-----ಫೋಟೊ: ಲಕ್ಷ್ಮಿಸಾಗರ ಮತ್ತು ವಿಜಾಪುರ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಎಂದು ಹೇಳಿದ ಅಧಿಕಾರಿಗಳ ಮೇಲೆಯೇ ತಿರುಗಿಬಿದ್ದ ಮಾರಾಟಗಾರರು.