ಸಾರಾಂಶ
ಕ್ಯಾಪ್ಟನ್ ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ವಿ. ಅವಲಕ್ಕಿ ಅವರು ಕ್ಯಾಪ್ಟನ್ ಪ್ರಾಂಜಲ್ ಕುರಿತು ಮಾಹಿತಿ ನೀಡಿದರು. ಹುತಾತ್ಮರಾದ ವೀರ ಯೋಧರಾದ ಕ್ಯಾಪ್ಟನ್ ಶುಭಂ ಗುಪ್ತ, ಲ್ಯಾನ್ಸ್ ನಾಯ್ಕ್ ಸಂಜಯ್ ಬಿಸ್ಟ್, ಹವಾಲ್ದಾರ್ ಅಬ್ದುಲ್ ಮಜೀದ್, ಪಾರಾಟ್ರೂಪರ್ ಸಚಿನ್ ಲಾರ್ ಬಗ್ಗೆಯೂ ಮಾಹಿತಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕ್ಯಾಪ್ಟನ್ ಪ್ರಾಂಜಲ್ ಸ್ಕೌಟ್ ಆಗಿ, ರೋವರ್ ಆಗಿ ವಿವಿಧ ಹಂತಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಬಳಿಕ ಎಂಜಿನಿಯರ್ ಪದವಿ ಹುದ್ದೆ ಬಿಟ್ಟು ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟು ಹುತಾತ್ಮರಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್-ಗೈಡ್ಸ್ ಶಿವಮೊಗ್ಗ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಹೇಳಿದರು.ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಯೋಧ, ಭಾರತದ ಹೆಮ್ಮೆಯ ಪುತ್ರ, ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕ್ಯಾಪ್ಟನ್ ಪ್ರಾಂಜಲ್ ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ರಾಷ್ಟ್ರ ರಕ್ಷಣೆ ಕಾರ್ಯದ ಸಂದರ್ಭ ಉಗ್ರರ ದಾಳಿಯಲ್ಲಿ ಭಾರತ ಮಾತೆಯ ಮಡಿಲಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಇಂತಹ ಸೈನಿಕರು ದೇಶದ ಶಕ್ತಿ ಎಂದು ತಿಳಿಸಿದರು.ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ. ಬಿಂದುಕುಮಾರ್ ಮಾತನಾಡಿ, ಪ್ರಾಂಜಲ್ ಅವರ ಸಾವಿನಿಂಧ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ. ಸದಾ ದೇಶಪ್ರೇಮ, ಸೇನೆ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದ ಪ್ರಾಂಜಲ್ ಕರ್ನಾಟಕದವರು. ಇಂತಹ ಮಹನೀಯರು ಸದಾ ಅವೀಸ್ಮರಣೀಯ ಎಂದರು.
ಕ್ಯಾಪ್ಟನ್ ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ವಿ. ಅವಲಕ್ಕಿ ಅವರು ಕ್ಯಾಪ್ಟನ್ ಪ್ರಾಂಜಲ್ ಕುರಿತು ಮಾಹಿತಿ ನೀಡಿದರು.ಹುತಾತ್ಮರಾದ ವೀರ ಯೋಧರಾದ ಕ್ಯಾಪ್ಟನ್ ಶುಭಂ ಗುಪ್ತ, ಲ್ಯಾನ್ಸ್ ನಾಯ್ಕ್ ಸಂಜಯ್ ಬಿಸ್ಟ್, ಹವಾಲ್ದಾರ್ ಅಬ್ದುಲ್ ಮಜೀದ್, ಪಾರಾಟ್ರೂಪರ್ ಸಚಿನ್ ಲಾರ್ ಬಗ್ಗೆಯೂ ಮಾಹಿತಿ ನೀಡಲಾಯಿತು.
ಜಿಲ್ಲಾ ಕಾರ್ಯದರ್ಶಿ ಎಚ್. ಪರಮೇಶ್ವರ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಹಿರಿಯ ಸ್ಕೌಟರ್ ಕೃಷ್ಣಸ್ವಾಮಿ, ಹಿರಿಯ ಗೈಡರ್ ಮೀನಾಕ್ಷಮ್ಮ, ಮಲ್ಲಿಕಾರ್ಜುನ ಕಾನೂರ್, ದೇವಯ್ಯ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.- - - -ಫೋಟೋ:
ಹುತಾತ್ಮ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.