ಕನ್ನಡಪ್ರಭ ವಾರ್ತೆ ಕುಶಾಲನಗರ
ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಆದೇಶದ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.ಪ್ರವಾಸಿ ಮಂದಿರದಿಂದ ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಬಂದ ಕ.ರ.ವೇ. ಕಾರ್ಯಕರ್ತರು ಸಮಿತಿಯ ವಿರುದ್ದ ಧಿಕ್ಕಾರ ಕೂಗಿದರು. ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕ.ರ.ವೇ. ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ, ಕರ್ನಾಟಕದಲ್ಲಿ ಅನಾವೃಷ್ಠಿ ಕಾರಣ ಬರದ ಪರಿಸ್ಥಿತಿ ಎದುರಾಗಿದೆ. ನಮ್ಮ ಜನತೆ, ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬೆಳೆಗೆ ನೀರಿಲ್ಲದೆ ರೈತಾಪಿ ವರ್ಗ ಕಂಗಾಲಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದರೂ ನೆರೆಯ ತಮಿಳುನಾಡಿಗೆ ಪ್ರತಿನಿತ್ಯ ನೀರು ಹರಿಸಬೇಕೆನ್ನುವ ಆದೇಶ ಅವೈಜ್ಞಾನಿಕ. ನಮ್ಮ ಜಲಾಶಯಗಳು ಬರಡಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ರಾಜ್ಯ ಸರ್ಕಾರ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿಬೇಕಿದೆ. ರಾಜ್ಯದ ವಸ್ತುಸ್ಥಿತಿ ವಿವರಿಸಬೇಕಿದೆ ಎಂದು ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ನೀರು ಹರಿಸುವುದನ್ನು ನಮ್ಮ ಸಂಘಟನೆ ಒಪ್ಪುವುದಿಲ್ಲ ಎಂದು ತಿಳಿಸಿದರು.ಜಿಲ್ಲಾ ಸಂಚಾಲಕ ಎಂ.ಎಸ್.ಮಣಿಕಂಠ ಮಾತನಾಡಿ, ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರದ ಛಾಯೆ ಎದುರಾಗಿದೆ. ಹೀಗಿದ್ದರೂ ತಮಿಳುನಾಡಿನ ನೀರು ಹರಿಸಬೇಕೆನ್ನುವುದು ನ್ಯಾಯಸಮ್ಮತವಾದ ವಿಚಾರವಲ್ಲ. ಪ್ರತಿ ಬಾರಿ ಕೂಡ ಸಮಿತಿ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್ ಕಾವಲ್ ಕೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಸರಳಾ ರಾಮಣ್ಣ, ತಾಲೂಕು ಕಾರ್ಯದರ್ಶಿ ನಿರ್ಮಲ, ಕುಶಾಲನಗರ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಮಡಿಕೇರಿ ತಾಲೂಕು ಅಧ್ಯಕ್ಷ ಅರುಣ, ಮಡಿಕೇರಿ ಗೌರವಾಧ್ಯಕ್ಷ ನಾಗರಾಜ, ಮುಖಂಡರಾದ ಸಾಹಿದ್, ಕಮಾಲುದ್ದೀನ್, ರಾಜೇಗೌಡ, ಪುಟ್ಟಮ್ಮ, ಮನೋಜ್, ಅಶೋಕ್, ವಿನ್ಸೆಂಟ್ ಲೋಬೋ, ರಮೇಶ್ ರೈ, ಸುಂದರ್, ವಿ. ಪಿ. ನಾಗರಾಜು, ಪ್ರೇಮ, ಸೌಂದರ್ಯ, ಗಂಗಾ ಪೂರ್ಣೇಶ್, ಪ್ರಶಾಂತ್, ಮಹೇಶ, ನಿತಿನ್ ಮತ್ತಿತರರು ಇದ್ದರು.