ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ ಹಾನಿ

| Published : Jun 13 2025, 01:06 AM IST

ಸಾರಾಂಶ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ ಹಾನಿಗೀಡಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹರಪನಹಳ್ಳಿ:

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ ಹಾನಿಗೀಡಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ತಲುವಾಗಲು ಗ್ರಾಮದಲ್ಲಿ ಗುಡ್ಡದಿಂದ ನೀರು ಹರಿದು ಅಂದಾಜು 20 ಮನೆಗಳಿಗೆ ನೀರು ನುಗ್ಗಿದೆ. ಮಾದಾಪುರ ಗ್ರಾಮದಲ್ಲಿ ಬಂಡ್ರಿ ಮಲ್ಲಪ್ಪ ಎಂಬವರ ಮನೆಗೆ ಮಳೆ ನೀರು ನುಗ್ಗಿ ಜೋಳ, ಅಕ್ಕಿ ತರಕಾರಿ ಹಾಗೂ ಅಡುಗೆ ಸಾಮಗ್ರಿಗಳು, ಬಟ್ಟೆಗಳು ನೀರು ಪಾಲಾಗಿವೆ. ತಾಲೂಕಿನಾದ್ಯಂತಹ ಗುರುವಾರ ಬೆಳಗಿನಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಜನರು ಮನೆ ಬಿಟ್ಟು ಹೊರಬರಲು ಕಷ್ಟವಾಗಿದೆ.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಲುವಾಗಲು ಗ್ರಾಮಕ್ಕೆ ಭೇಟಿ ನೀಡಿ ಮನೆಗಳಿಗೆ ನೀರು ನುಗ್ಗಿರುವುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಪಂ ಅಭಿವೃದ್ದಿ ಅಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ 199.3 ಮಿಮೀ ಮಳೆ ಆಗಿದ್ದು, ಸರಾಸರಿ 28.47 ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ತಲುವಾಗಲು ಗ್ರಾಮದ ಮಳೆ ಹಾನಿಗೀಡಾದ ಬಡಾವಣೆಗೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭಾ ಸದಸ್ಯ ಜಾಕೀರ ಹುಸೇನ್, ತಹಶೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ ಇತರರಿದ್ದರು.