ಮಳೆಯ ಅಬ್ಬರಕ್ಕೆ ನರಗುಂದದಲ್ಲಿ ಮನೆಗಳಿಗೆ ನುಗ್ಗಿದ ನೀರು

| Published : Jun 13 2025, 02:20 AM IST

ಸಾರಾಂಶ

ನರಗುಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬುಧವಾರ ರಾತ್ರಿ ದಾಖಲೆಯ ಮಳೆ ಸುರಿದಿದೆ. ಮಳೆ ಅಬ್ಬರಕ್ಕೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನತೆ ರಾತ್ರಿ ಇಡೀ ನೀರನ್ನು ಹೊರ ಹಾಕುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ.

ನರಗುಂದ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬುಧವಾರ ರಾತ್ರಿ ದಾಖಲೆಯ ಮಳೆ ಸುರಿದಿದೆ. ಮಳೆ ಅಬ್ಬರಕ್ಕೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನತೆ ರಾತ್ರಿ ಇಡೀ ನೀರನ್ನು ಹೊರ ಹಾಕುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಹಾಗೂ ಮೇಲಭಾಗದಲ್ಲಿ ವಿಪರೀತ ಮಳೆ ಸುರಿದಿದ್ದರಿಂದ ಗುರುವಾರ ಬೆಳಗಿನ ಜಾವ ಬೆಣ್ಣೆ ಹಳ್ಳಕ್ಕೆ ಎಂದು ಕೇಳರಿಯದ ರೀತಿಯಲ್ಲಿ ಪ್ರವಾಹ ಬಂದಿದೆ. ಗದುಗಿಗೆ ಹೋಗುವ ಒಳ ರಸ್ತೆ ಕುರ್ಲಗೇರಿ ಗ್ರಾಮ ಹಾಗೂ ರೋಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಯಾವಗಲ್ ಗ್ರಾಮದ ಸೇತುವೆ ಬೆಣ್ಣೆ ಹಳ್ಳದ ಪ್ರವಾಹದ ನೀರು ಸೇತುವೆ ಮೇಲೆ ಹರಿದಿದ್ದರಿಂದ ಬಸ್ ಸಂಚಾರ ಕೂಡ ಸಂರ್ಪೂಣ ಬಂದಾಗಿದೆ. ಅದೇ ರೀತಿ ಕುರ್ಲಗೇರಿ ಗ್ರಾಮದಲ್ಲಿ ಬೆಣ್ಣೆ ಹಳ್ಳದ ಪ್ರವಾಹದ ನೀರು ಹಳೆ ಗ್ರಾಮದಲ್ಲಿ ನುಗ್ಗಿದ್ದರಿಂದ ಅಲ್ಲಿ ವಾಸ ಮಾಡುವ ಜನತೆ ಜೀವ ಭಯದಲ್ಲಿ ಓಡಾಡುವದು ಕಂಡು ಬಂತು. ತಾಲೂಕಿನ ಇನ್ನೊಂದು ಗ್ರಾಮದ ಸುರಕೋಡ ಹಳೇ ಗ್ರಾಮದ ಸುತ್ತಲು ಪ್ರವಾಹದ ನೀರು ಸುತ್ತುವರಿದಿದ್ದರಿಂದ ಹಳೇ ಗ್ರಾಮದ ಜನರು ಹಲವಾರು ಕಷ್ಟಗಳನ್ನು ಎದುರಿಸಿದ್ದಾರೆ. ಬೆಣ್ಣೆಹಳ್ಳದ ಪ್ರವಾಹ ನೀರು ಗಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ರಸ್ತೆಗೆ ನುಗ್ಗಿದ್ದರಿಂದ ಶಿರೋಳಕ್ಕೆ ಹೋಗುವ ಮಾರ್ಗವು ಸಂಪೂರ್ಣ ಬಂದ್‌ ಆಗಿದೆ.

ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪುರ, ಖಾನಾಪುರ, ರಡ್ಡೇರ ನಾಗನೂರ, ಶಿರೋಳ ಗ್ರಾಮಗಳ ರೈತರು ಬಿತ್ತನೆ ಮಾಡಿದ ಹೆಸರು ಬೆಳೆಗಳು ಅಪಾರ ಪ್ರಮಾಣದಲ್ಲಿ ಪ್ರವಾಹಕ್ಕೆ ಹಾನಿಯಾಗಿವೆ.

ಮಳೆ ಅಬ್ಬರಕ್ಕೆ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಆದರೆ, ಯಾವುದೇ ರೀತಿ ಪ್ರಾಣ ಹಾನಿಯಾಗಿ ಆಗಿರುವುದಿಲ್ಲ, ಮನೆಗಳಗೆ ಹಾನಿಯಾಗಿದ್ದರೆ ಅವುಗಳನ್ನು ಸರ್ವೆ ಮಾಡಬೇಕೆಂದು ನಮ್ಮ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.