ರೈತರ ಹೊಲಗದ್ದೆಗಳಿಗೆ ನುಗ್ಗಿದ ನೀರು: ರೈತರು ಕಂಗಾಲು

| Published : Aug 08 2025, 01:00 AM IST

ಸಾರಾಂಶ

ಹೊಸೂರ ಮಣ್ಣೂರ ಶೇಷಗಿರಿ ಹಾಗೂ ಗಡಿಭಾಗದ ಮಹಾರಾಷ್ಟ್ರದ ನಾಗಣಸೂರ ತೋಳನೂರ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯ ಪರಿಣಾಮ ಗ್ರಾಮೀಣ ಭಾಗದ ಜನರು ರೈತರು ತತ್ತರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಹೊಸೂರ ಮಣ್ಣೂರ ಶೇಷಗಿರಿ ಹಾಗೂ ಗಡಿಭಾಗದ ಮಹಾರಾಷ್ಟ್ರದ ನಾಗಣಸೂರ ತೋಳನೂರ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯ ಪರಿಣಾಮ ಗ್ರಾಮೀಣ ಭಾಗದ ಜನರು ರೈತರು ತತ್ತರಿಸಿದ್ದಾರೆ.

ಮಳೆಯಿಂದ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ತೊಗರಿ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ ವಿವಿಧ ಬೆಳೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ,ಅನ್ನದಾತರಿಗೆ ನಷ್ಟ ಉಂಟಾಗಿದೆ.

ಮಳೆಯಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ, ಕೆರೆಗಳಂತಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹತ್ತಿ ತೊಗರಿ ಹೆಸರು ಉದ್ದು ಸೂರ್ಯಕಾಂತಿ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ವಿವಿಧ, ಬೆಳೆಗಳು ನೀರಿನಲ್ಲಿ‌ ನಿಂತಿವೆ. ಕೆಲವು ಕಡೆ ನೀರಿನ ಹೊಡೆತಕ್ಕೆ ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ.ಮಳೆಯಿಂದ ಮಣ್ಣೂರ ಗ್ರಾಮದ ಹತ್ತಿರ ಇರುವ ಕಿರಹಳ್ಳ ಹಾಗೂ ರಾಮನಗರ ಗ್ರಾಮದ ಸಮೀಪದ ಹೈದ್ರಾ ಹಳ್ಳ ತುಂಬಿ‌ ಹರಿಯುತ್ತಿವೆ -ಹೊಸೂರ ಮಣ್ಣೂರ ಕರಜಗಿಗೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿರುವ ಕಿರಹಳ್ಳದ ಹಾಗೂ ಹೈದ್ರಾ ಹಳ್ಳದ ರಾಜ್ಯ ಹೆದ್ದಾರಿ ಮೇಲೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಪಾರ ಪ್ರಮಾಣದ ನೀರು ಹರಿದ ಪರಿಣಾಮ ಮಣ್ಣೂರದಿಂದ ಕರಜಗಿ ಅಫಜಲಪುರಗೆ ಹೋಗುವ ರಸ್ತೆ ಸಂಚಾರ ಕಡಿತಗೊಂಡಿತ್ತು.ಮಳೆಯಿಂದ ಹೊಸೂರ ಮಣ್ಣೂರ ಶೇಷಗಿರಿ ಗ್ರಾಮಗಳ ರೈತಾಪಿ ವರ್ಗಕ್ಕೆ ಸಾಕಷ್ಟು ‌ನಷ್ಟವಾಗಿದೆ.