ಸಾರಾಂಶ
ಕಳೆದ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಕಡಿಮೆಯಾಗಿದೆ.
ನರಸಿಂಹರಾಜಪುರ:
ನೀರು ಮುಗಿದು ಹೋಗುವ ಸಂಪತ್ತಾಗಿರುವುದರಿಂದ ಮಿತವಾಗಿ ಬಳಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ನರಸಿಂಹರಾಜಪುರದ ಪೋಲಿಸ್ ಠಾಣೆಯ ಸಿಪಿಐ ಗುರುದತ್ತ ಕಾಮತ್ ತಿಳಿಸಿದರು.ಭಾನುವಾರ ಅಂಬೇಡ್ಕರ್ ವೃತ್ತದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ನೀರಿನ ಸಂರಕ್ಷಣೆ ಬಗ್ಗೆ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಕಡಿಮೆಯಾಗಿದೆ. ನೂರಾರು ಅಡಿ ಕೊಳವೆ ಬಾವಿ ಕೊರಿಸಿದರೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಿ, ನಲ್ಲಿಗಳಲ್ಲಿ ಅನಾವಶ್ಯಕವಾಗಿ ಖರ್ಚು ಮಾಡಬೇಡಿ. ಧ.ಗ್ರಾ.ಯೋಜನೆಯವರು ಜನತೆಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಅಯೋಜಿಸಿರುವುದು ಶ್ಲಾಘನೀಯವಾದದ್ದು ಎಂದರು.
ಈ ವೇಳೆ ಧ.ಗ್ರಾ.ಯೋಜನೆಯ ಬಸ್ತಿಮಠದ ಒಕ್ಟೂಟದ ವೀರಭದ್ರ, ಚನ್ನಗಿರಿಯ ಶೃತಿ ಸಾಂಸ್ಕೃತಿಕ ಕಲಾ ತಂಡದ ಅಧ್ಯಕ್ಷ ವೆಂಕಟೇಶ್, ಧ.ಗ್ರಾ.ಯೋಜನೆ ಉಷಾ, ಭಾನು, ನಿರ್ಮಲ, ವೀಣಾ, ಧ.ಗ್ರಾ.ಯೋಜನೆಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ವಿಪತ್ತು ನಿರ್ವಾಹಣ ಘಟಕ ಸದಸ್ಯ ಕೆ.ಎಂ.ಪ್ರವೀಣ್,ಪಟ್ಟಣ ಪಂಚಾಯಿತಿಯ ನೀರುಗಂಟಿಗಳು ಉಪಸ್ಥಿತರಿದ್ದರು.ನಂತರ ಚನ್ನಗಿರಿ ಶೃತಿ ಸಾಂಸ್ಕೃತಿಕ ಕಲಾ ತಂಡದವರು ನೀರಿನ ಸಂರಕ್ಷಣೆ ಬಗ್ಗೆ ಜನತೆಗೆ ಅರಿವು ಮೂಡಿಸುವ ಬೀದಿನಾಟಕ ಪ್ರದರ್ಶಿಸಿದರು.