ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಕೇಂದ್ರ ಪುರಸ್ಕೃತ ಯೋಜನೆಯಡಿ ಹುಮನಾಬಾದ್, ಚಿಟಗುಪ್ಪ, ಮತ್ತು ಹಳ್ಳಿಖೇಡ (ಬಿ) ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ನೀರು ಸರಬರಾಜು ಅಭಿವೃದ್ಧಿ ಯೋಜನೆಯ 160 ಕೋಟಿ ರು. ಅನುದಾನದ ಕಾಮಗಾರಿಗೆ ಹಾಗೂ ಜೆಸ್ಕಾಂ ವತಿಯಿಂದ ನಿಂಬೂರ ಗ್ರಾಮದಲ್ಲಿ ₹8.5 ಕೋಟಿ ವೆಚ್ಚದ 33/11 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗಳಿಗೆ ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಶಂಕು ಸ್ಥಾಪನೆ ನೇರವೇರಿಸಿದರು.ಪಟ್ಟಣದ ಥೇರ್ ಮೈದಾನದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು, ನೀರು ಜೀವ ಜಲ, ಆಹಾರ ಬೇಕಾದರೆ ಆಮದು ಮಾಡಿಕೊಳ್ಳಬಹುದು, ರಸ್ತೆ ವಿದ್ಯುತ್ ಇಲ್ಲದೆ ಇದ್ದರೂ ನಡೆಯುತ್ತದೆ ಆದರೆ ನೀರು ಇಲ್ಲದೆ ಇದ್ದರೆ ಬದುಕಲೂ ಸಾಧ್ಯವಿಲ್ಲ. ಮುನುಷ್ಯನಿಗೆ ಗಾಳಿ ಎಷ್ಟು ಮುಖ್ಯವೋ ನೀರು ಸಹ ಅಷ್ಟೆ ಮುಖ್ಯ ಹೀಗಾಗಿ ಜಿಲ್ಲೆಯ ಭಾಲ್ಕಿ, ಹುಮನಾಬಾದ್, ಚಿಟಗುಪ್ಪ, ಹಳ್ಳಿಖೇಡ ಪಟ್ಟಣಗಳಿಗೆ ಕುಡಿಯುವ ನೀರು ಕಾರಂಜಾ ಜಲಾಶಯದಿಂದ ನೀರು ಸರಬರಾಜಾಗಿ 28 ಸಾವಿರ ಹೆಕ್ಟೇರ್ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ ಹಾಗೆಯೇ ಇದರಿಂದ ಪ್ರತಿಯೊಬ್ಬರಿಗೆ 100 ಲೀಟರ್ ನೀರು ಪ್ರತಿದಿನ ಸಿಗುತ್ತದೆ ಎಂದರು.
ನಗರಗಳು ನವೀಕರಣಗೊಳ್ಳುತ್ತಿವೆ. ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆ ಬಡಾವಣೆಗೆ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ವ್ಯವಸ್ಥೆ ಬೇಕು. ಬೇಸಿಗೆಯಲ್ಲಿ ಬಾವಿಗಳು ಹಾಗೂ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿಗೆ ಹಾಹಾಕಾರ ಉಂಟಾಗುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಗಿದೆ ಎಂದರು.ನಿಂಬೂರ್ ಗ್ರಾಮದಲ್ಲಿ 8.5ಕೋಟಿ ರು., ವೆಚ್ಚದಲ್ಲಿ 33/11ಕೆವಿ ವಿದ್ಯುತ್ ಕೇಂದ್ರ ಸ್ಥಾಪಿಸಿ ಎಲ್ಲ ರೈತರಿಗೆ ಗುಣಮಟ್ಟದ ವಿದ್ಯುತ್ ಸಿಗುವಂತೆ ಮಾಡಲಾಗಿದೆ. ಹಾಗೆಯೇ ಇನ್ನು ಸುಮಾರು ₹1500 ಕೋಟಿ ಅನುದಾನದಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ 800 ಜನ ವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಜಿಲ್ಲೆಯಲ್ಲಿ ಹುಮನಾಬಾದ್ ಹಾಗೂ ಭಾಲ್ಕಿ ಐತಿಹಾಸಿಕ ಪ್ರಸಿದ್ಧಿ ಪಡೆದ ತಾಲೂಕು ಕೇಂದ್ರಗಳಾಗಿವೆ. ಹುಮನಾಬಾದ್, ಭಾಲ್ಕಿ ನಗರಸಭೆ ಹಾಗೂ ಮನ್ನಾಖೇಳಿ, ಕಮಠಾಣಾ, ರಾಜೇಶ್ವರ ಗ್ರಾಮಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಸ್ಪಿ ಪ್ರದೀಪ ಗುಂಟಿ ಉಪಸ್ಥಿತರಿದ್ದರು.