ಸಮರ್ಪಕ ನೀರಿಗಾಗಿ ಕನಕಗಿರಿಯಲ್ಲಿ ಮುಖ್ಯಾಧಿಕಾರಿಗೆ ಘೇರಾವ್

| Published : Aug 03 2024, 12:33 AM IST

ಸಮರ್ಪಕ ನೀರಿಗಾಗಿ ಕನಕಗಿರಿಯಲ್ಲಿ ಮುಖ್ಯಾಧಿಕಾರಿಗೆ ಘೇರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗಿರಿ ೩ನೇ ವಾರ್ಡಿನ ಗಂಗಾ ಕ್ಯಾಂಪಿಗೆ ಏಳೆಂಟು ತಿಂಗಳಿಂದ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ವಾರ್ಡಿಗೆ ಆಗಮಿಸಿದ್ದ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಅವರಿಗೆ ಘೇರಾವ್ ಹಾಕಿದರು.

ಕನಕಗಿರಿ: ಇಲ್ಲಿನ ೩ನೇ ವಾರ್ಡಿನ ಗಂಗಾ ಕ್ಯಾಂಪಿಗೆ ಏಳೆಂಟು ತಿಂಗಳಿಂದ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ವಾರ್ಡಿಗೆ ಆಗಮಿಸಿದ್ದ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಅವರಿಗೆ ಘೇರಾವ್ ಹಾಕಿದ ಘಟನೆ ಶುಕ್ರವಾರ ನಡೆಯಿತು.

ಹಲವು ತಿಂಗಳುಗಳಿಂದ ಉಂಟಾದ ನೀರಿನ ಸಮಸ್ಯೆ ಕುರಿತಂತೆ ಹಲವು ಪಪಂ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಎಂದಿನಂತೆ ಮುಂದುವರಿದಿದೆ. ಅದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ನೀರಿನ ಅಭಾವ ನೀಗಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದರೆ ನಾವೆಲ್ಲರೂ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ವಾರ್ಡಿನ ನಿವಾಸಿಗಳು ಎಚ್ಚರಿಸಿದರು.

ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ವಿದ್ಯುತ್ ಸಂಪರ್ಕದ ಅಡಚಣೆಯಿಂದಾಗಿ ಬೋರ್‌ವೆಲ್‌ನಿಂದ ನೀರು ಸರಬರಾಜು ಆಗಲು ಸಮಸ್ಯೆಯಾಗಿತ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ವಾರ್ಡಿಗೆ ಹೋಗಿ ನೀರಿನ ಸಮಸ್ಯೆಯ ಬಗ್ಗೆ ನಿವಾಸಿಗಳಿಂದ ಮಾಹಿತಿ ಪಡೆದಿದ್ದು, ಬೆಳಗ್ಗೆಯಿಂದ ಸಾಯಂಕಾಲದ ವರೆಗೂ ವಾರ್ಡಿನಲ್ಲಿ ಕೆಲಸ ಮಾಡಲಾಗಿದೆ. ಪೈಪ್‌ಲೈನ್‌ನಲ್ಲಿ ತ್ಯಾಜ್ಯ ತುಂಬಿ ಬ್ಲಾಕ್ ಆಗಿದ್ದರಿಂದ ನೀರು ಸರಬರಾಜು ಆಗಿಲ್ಲ. ೩ನೇ ವಾರ್ಡಿಗೆ ನೀರಿನ ಸಮಸ್ಯೆ ನೀಗಿಸಲಾಗಿದ್ದು, ಈಗ ಯಾವುದೇ ಸಮಸ್ಯೆ ಇಲ್ಲ ಎಂದರು.

ನೀರು ಸರಬರಾಜು ಮಾಡುವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ವಾರ್ಡಿಗೆ ಸಮಯಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ವಾಟರ್‌ಮ್ಯಾನ್‌ಗಳು ಅಧಿಕಾರಿಗಳ ಹಾಗೂ ಪಪಂ ಸದಸ್ಯರ ಮಾತಿಗೆ ಬೆಲೆ ಇಲ್ಲವಾಗಿದೆ. ಇದರಿಂದ ವಾರ್ಡಿನ ಜನ ರೊಚ್ಚಿಗೆದ್ದಿದ್ದಾರೆ ಎಂದು ಪಪಂ ಸದಸ್ಯ ಶರಣೇಗೌಡ ಹೇಳಿದರು.

ಶ್ರೀನಿವಾಸ ಬಲಿಜ, ಶ್ರೀಧರ ನಾಯಕ, ಲಾಲಸಾಬ, ಕನಕರಾಯ ನಾಯಕ, ಸದಾನಂದ ಕುರುಬರ, ಬುಡಾನಸಾಬ ಬಂಡಿ, ಇಬ್ರಾಹಿಂ ಚಳಮರದ, ರಾಮಣ್ಣ ಆಗೋಲಿ, ರಾಜಮಾಬಿ, ಲಕ್ಷ್ಮೀ, ಶಾರದಮ್ಮ, ಫಾತಿಮಾ ಇತರರು ಇದ್ದರು.