ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೇರಳದ ವಯನಾಡಿನ ಮೇಪಾಡಿ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಶಾಲಾ ವಿದ್ಯಾರ್ಥಿ ಬಾಲಕ ದಾರುಣವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಗೆ ಒಳಪಡುವ ಗುಹ್ಯ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ರವಿ-ಕವಿತಾ ದಂಪತಿ ಪುತ್ರ ರೋಹಿತ್ (9) ಮೃತ ಬಾಲಕ.ಗುಹ್ಯ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೋಹಿತ್ 15 ದಿನಗಳ ಹಿಂದೆ ತಾಯಿ ಕವಿತಾ ಜೊತೆಗೆ ಮೈಪಾಡಿಗೆ ಹೋಗಿದ್ದ. ರೋಹಿತ್ನನ್ನು ತನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದ ಕವಿತಾ, ಬೇರೆಡೆ ಕೆಲಸಕ್ಕೆ ಹೋಗಿದ್ದಾರೆ. ಹೀಗಾಗಿ ತಾಯಿ ಕವಿತಾ ಬದುಕಿದ್ದು ಮಗ ರೋಹಿತ್ ಮೃತಪಟ್ಟಿದ್ದಾನೆ.ಬುಧವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ವೇಳೆ ಬಾಲಕನ ಮೃತದೇಹ ಪತ್ತೆ ಯಾಗಿದೆ. ಸದ್ಯ ಕೇರಳಕ್ಕೆ ತೆರಳಿರುವ ರೋಹಿತ್ ತಂದೆ ರವಿ ಮತ್ತು ಕುಟುಂಬಸ್ಥರು ಬಾಲಕನ ಮೃತದೇಹ ತರಲು ಮೇಪಾಡಿಗೆತೆರಳಿದ್ದಾರೆ. ಘಟನೆಯಲ್ಲಿ ಕವಿತಾಳ ಅಕ್ಕನ ಗಂಡ ಹಾಗೂ ಅವರ ಮಗಳು ಕೂಡ ಮೃತ ಪಟ್ಟಿದ್ದು, ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ....................
ಇತ್ತೀಚೆಗೆ ತಂಗಿ ಕವಿತಾ ವಯನಾಡಿನ ಮೇಪಾಡಿಯಲ್ಲಿನ ಅಕ್ಕನ ಮನೆಗೆ ತನ್ನ ಮಗ ರೋಹಿತ್ ಜೊತೆಗೆ ತೆರಳಿದ್ದಳು, ಬಳಿಕ ಅಕ್ಕನ ಮನೆಯಲ್ಲಿ ರೋಹಿತ್ ನನ್ನು ಬಿಟ್ಟು ಬೇರೆಡೆ ಕೆಲಸಕ್ಕೆಂದು ತೆರಳಿದ್ದಳು. ಈ ಸಂದರ್ಭ ದುರಂತ ಸಂಭವಿಸಿದ್ದು ಘಟನೆಯಲ್ಲಿ ತಂಗಿ ಮಗ ರೋಹಿತ್ ಕೂಡ ಕಣ್ಮರೆಯಾಗಿದ್ದ. ಬುಧವಾರ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭ ಬಾಲಕನ ಮೃತದೇಹ ದೊರೆತಿದ್ದು, ಮಾಹಿತಿ ತಿಳಿದ ಕೂಡಲೇ ಮೇಪಾಡಿಗೆ ಬಂದಿದ್ದೇವೆ.-ಕವಿತಾಳ ಸಹೋದರ ಸಂಬಂಧಿ