ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದಲ್ಲಿಯ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ನಮ್ಮ ಶ್ರಮವಿದೆ. ನಗರಸಭೆ ಚುನಾವಣೆ ಹಿನ್ನೆಲೆ ತಾವೇ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕರು ಹಾಗೂ ಮುಖಂಡರ ನಡೆ ಸರಿಯಲ್ಲ. ಇದರಿಂದ ನಗರದ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸ್ಲಂ ಪ್ರದೇಶಗಳಾದ ಕತಾಟೆ ಪ್ಲಾಟ್, ಮಹಾಲಿಂಗೇಶ್ವರ ಟ್ಲೋಲೊನಿ, ಚೌಡಯ್ಯ ನಗರ ಮುಂತಾದವುಗಳ ಪಟ್ಟಿಮಾಡಿ 11.8.2021ರಲ್ಲಿ ನಾನು ಶಾಸಕರಿದ್ದ ಸಂದರ್ಭದಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿತ್ತು ಆಗ ಠರಾವು ಪಾಸ್ಮಾಡಿ ಸ್ಲಂ ಬೋರ್ಡ್ಗೆ ಕಳುಹಿಸಲಾಗಿತ್ತು. ನಂತರ ಇತರ ಪ್ರಕ್ರಿಯೆಗಳು ನಡೆದು 2023ರ ಸೆಪ್ಟೆಂಬರ್ 8ರಂದು ಆದೇಶ ಆಯಿತು. ಕೊಳಚೆ ಪ್ರದೇಶದ ಮನೆಗಳ ಮಾಹಿತಿ ಪಡೆದ ಮಂಡಳಿಯವರು 2.3.2023ರಲ್ಲಿ ನೋಟೀಸ್ ಜಾರಿ ಮಾಡಿದ್ದರು. ನಂತರ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಕ್ಕುಪತ್ರಗಳ ವಿತರಣೆಯಾಗಲಿಲ್ಲ. ಹಕ್ಕುಪತ್ರಗಳ ವಿತರಣೆ ಹಿಂದೆ ಕಾಂಗ್ರೆಸ್ನ ಶ್ರಮವಿದೆ. ಬಿಜೆಪಿಯವರ ಯಾವುದೇ ಪ್ರಯತ್ನ ಇಲ್ಲವಾದರೂ ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ನಡೆದು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಅವಧಿ ಮುಗಿದ ನಂತರ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಗರದ ಜನಸಂಖ್ಯೆಗೆ ಅನುಗುಣವಾಗಿ ನೂರು ಹಾಸಿಗೆಗಳ ನೂತನ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರಿಗೆ ಮನವಿ ಸಲ್ಲಿಸಿ ಒಪ್ಪಿಗೆ ಪಡೆದಿದ್ದೇನೆ. ಅದೂ ಸಹ ಬಿಜೆಪಿಯವರ ಅಭಿವೃದ್ಧಿ ಕಾರ್ಯವಲ್ಲ ಎಂದು ಹೇಳಿದರು. ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ, ಸಹಕಾರ ನೀಡುತ್ತೇವೆ ಸಿದ್ಧರಿದ್ದೇವೆ. ಪ್ರೊಟೊಕಾಲ್ ಬಗ್ಗೆ ಮಾತನಾಡುವ ಬಿಜೆಪಿಗರು ಅಭಿವೃದ್ಧಿ ವಿಷಯದಲ್ಲಿ ಹಿಂದೇಟು ಹಾಕಬಾರದು. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.ಮುಖಂಡರಾದ ಅರ್ಜುನ ದಳವಾಯಿ, ಬಿ.ಎಸ್.ಸಿಂಧೂರ, ಮಾಜಿ ನಗರಸಭೆ ಅಧ್ಯಕ್ಷರಾದ ಪರಮಾನಂದ ಗೌರೋಜಿ, ಈಶ್ವರ ವಾಳೆಣ್ಣವರ, ದಿಲಾವರ ಶಿರೋಳ, ಸದಸ್ಯರಾದ ಸುನೀಲ ಸಿಂಧೆ, ದಾನೇಶ ಘಾಟಗೆ, ಕಿರಣ ಪಿಸಾಳ, ಮುಖಂಡರಾದ ಮಹದೇವ ಪಾಟೀಲ, ಮಹೇಶ ಕೋಳಿ, ಸಂಜು ಮೀಸಿ, ಎ.ಆರ್.ಸಿಂಧೆ, ಬಸವರಾಜ ಹರಕಂಗಿ, ಸೇರಿಂದತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.