ನಮ್ಮ ನೀರಿನ ಹಕ್ಕನ್ನು ಕೇಳುತ್ತಿದ್ದೇವೆ: ಎಚ್.ಸಿ.ಬಾಲಕೃಷ್ಣ

| Published : Jun 01 2025, 01:40 AM IST

ನಮ್ಮ ನೀರಿನ ಹಕ್ಕನ್ನು ಕೇಳುತ್ತಿದ್ದೇವೆ: ಎಚ್.ಸಿ.ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ನೀರನ್ನು ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸುವ ಬದಲು ಹೋರಾಟಗಾರರು ಸಹಕಾರ ನೀಡಲಿ. ನಾವೇನು ಅವರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ನಮ್ಮ ನೀರಿನ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ವಿರೋಧಿಸಿ ಹೋರಾಟ ಮಾಡುವುದರಿಂದ ಏನು ಪ್ರಯೋಜನ ಇಲ್ಲ. ತುಮಕೂರು ಭಾಗದ ಹೆಣ್ಣು ಮಕ್ಕಳನ್ನು ಮಾಗಡಿ ತಾಲೂಕಿಗೆ ಮದುವೆ ಮಾಡಿಕೊಟ್ಟಿದ್ದೀರಿ. ಅವರೆಲ್ಲರ ಬದುಕು ಹಸನಾಗಬೇಕಾದರೆ ಹೋರಾಟಗಾರರು ಯೋಜನೆಗೆ ಸಹಕಾರ ಕೊಡಲಿ ಎಂದರು.ಹೇಮಾವತಿ ನೀರನ್ನು ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನಮಗೆ ಅಲೋಕೇಷನ್ ಆಗಿರುವ 0.6 ಟಿಎಂಸಿ ನೀರನ್ನು ತರಲು ಲಿಂಕ್ ಕೆನಾಲ್ ಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.ಕುಮಾರಸ್ವಾಮಿರವರು ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ರವರು ಈ ಯೋಜನೆಯನ್ನು ಮಂಜೂರು ಮಾಡಿಸಿದ್ದರು. ಸಮ್ಮಿಶ್ರ ಸರ್ಕಾರ ಬಂದಾಗ ಬಿಜೆಪಿಯವರು ಅದನ್ನು ವಜಾ ಮಾಡಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಮಂಜೂರಾತಿ ಪಡೆದು ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಲಸ ಪ್ರಾರಂಭಿಸಿದ್ದೇವೆ ಎಂದರು.ಪ್ರತಿಭಟನೆ ಮಾಡುವುದು ಅವರ ಹಕ್ಕು, ಹೋರಾಟದಿಂದ ಏನು ಪ್ರಯೋಜನ ಇಲ್ಲ. ನಾವೆಲ್ಲ ಅಣ್ಣ ತಮ್ಮಂದಿರಂತಿದ್ದೇವೆ. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತದೆ. ಅದನ್ನು ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುವುದಿಲ್ಲ ಎಂದು ತಿಳಿಸಿದರು.ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಕಮಲ್ ಹಾಸನ್ ರವರು ಕ್ಷಮೆ ಕೇಳದಿದ್ದರೆ ನಮ್ಮ ರಾಜ್ಯದಲ್ಲಿ ಅವರ ಯಾವುದೇ ಸಿನಿಮಾಗಳು ಬಿಡುಗಡೆ ಆಗಬಾರದು. ನಾನು ಕೂಡಾ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇನೆ ಎಂದು ಎಚ್.ಸಿ.ಬಾಲಕೃಷ್ಣ ಹೇಳಿದರು.ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ತತ್ವ ಸಿದ್ದಾಂತ ಇದೆ. ಹೈಕಮಾಂಡ್ ಹಾಗೂ ರಾಜ್ಯದ ವರಿಷ್ಟರು ಸೂಕ್ತ ವ್ಯಕ್ತಿಗಳಿಗೆ ಸಂಪುಟ ವಿಸ್ತರಣೆ ಸಮಯದಲ್ಲಿ ಸಚಿವ ಸ್ಥಾನ ನೀಡುತ್ತಾರೆ. ನಾನು ಕೇಳಿದ ತಕ್ಷಣ ಅವರು ಸ್ಥಾನ ಕೊಡಲ್ಲ, ಬೇಡ ಅಂದರೆ ಕೊಡದೆಯೂ ಸುಮ್ಮನಿರಲ್ಲ. ಸಾಧಕ-ಬಾಧಕ ಚರ್ಚೆ ಮಾಡಿ ಅರ್ಹ ವ್ಯಕ್ತಿಗೆ ಸಚಿವ ಸ್ಥಾನ ನೀಡುತ್ತಾರೆ. ನಾನು ಕೂಡಾ ಆಕಾಂಕ್ಷಿಯೇ, ಸಚಿವ ಸ್ಥಾನ ಕೊಟ್ಟರೆ ಬೇಡ ಅನ್ನುವುದಿಲ್ಲ. ನಾನು ಕೇಳಿದ್ದೀನಿ ಅಷ್ಟೇ, ಹೈಕಮಾಂಡ್ ಯಾರಿಗೂ ಆಶ್ವಾಸನೆ ಕೊಟ್ಟಿಲ್ಲ. ನನ್ನ ಅಭಿಪ್ರಾಯವನ್ನು ಹೈಕಮಾಂಡ್ ಗೆ ತಿಳಿಸಿದ್ದೇನೆ ಎಂದರು.ತಾಪಂ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ದೇಶಕ ಪುಟ್ಟಯ್ಯ, ಮುಖಂಡರಾದ ಕ್ಯಾಸಾಪುರಮಂಜು, ದೊಡ್ಡಗಂಗವಾಡಿ ಗೋಪಾಲ್, ಗ್ರಾಪಂ ಸದಸ್ಯರಾದ ನಂದೀಶ್, ನಾಗರಾಜು, ಹನುಮಂತಯ್ಯ ಇದ್ದರು.ಈ ವೇಳೆ ತಾಲೂಕು ಕಚೇರಿ ಆವರಣದಲ್ಲಿ ಕೈಗಾರಿಕಾ ಇಲಾಖೆ ವತಿಯಿಂದ ಕೂಟಗಲ್ ಮತ್ತು ಬಿಡದಿ ಹೋಬಳಿಯ ಪಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ 10 ಟೈಲರಿಂಗ್ ಯಂತ್ರಗಳು, ವೃತ್ತಿಯಾಧಾರಿತ 65 ಟೂಲ್ ಕಿಟ್ ಗಳು ಹಾಗೂ ತಾಪಂ ಅನುದಾನದಲ್ಲಿ 30 ಸೋಲಾರ್ ಲೈಟ್ ಗಳನ್ನು ಶಾಸಕ ಬಾಲಕೃಷ್ಣ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಇಓ ಪೂರ್ಣಿಮಾ, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅಜಿತ್ ಗೌಡ ಹಾಜರಿದ್ದರು....ಕೋಟ್....ಬಿಡದಿ ಉಪನಗರ (ಟೌನ್ ಶಿಪ್ ) ಯೋಜನೆ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಗೊಂದಲ ನಿವಾರಿಸಲು ಮುಂದಿನ ದಿನಗಳಲ್ಲಿ ರೈತರ ಜೊತೆ ಸಭೆ ಮಾಡುತ್ತೇವೆ. ನಮ್ಮ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಸಮಸ್ಯೆ ಬಗೆಹರಿಸಲಿದೆ. ಜೆಡಿಎಸ್ ನವರು ಆಡಳಿತ ನಡೆಸಿದಾಗ ಸಮಸ್ಯೆ ಬಗೆಹರಿಸಲಿಲ್ಲ. ಈಗ ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. -ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ.31ಕೆಆರ್ ಎಂಎನ್ 6.ಜೆಪಿಜಿರಾಮನಗರ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಬಾಲಕೃಷ್ಣರವರು ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ,ಟೂಲ್ ಕಿಟ್ ಹಾಗೂ ಸೋಲಾರ್ ಲೈಟ್ ಗಳನ್ನು ವಿತರಣೆ ಮಾಡಿದರು.