ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಗಮನ ಹರಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಇನ್ನೂ ಆಗಬೇಕಿದ್ದು ಬಹಳಷ್ಟಿದೆ. ನಮ್ಮ ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ ಪಾಲು ಬರುವುದೇ ಎಂಬುದನ್ನು ನೋಡುತ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹಾವೇರಿ: ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಗಮನ ಹರಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಇನ್ನೂ ಆಗಬೇಕಿದ್ದು ಬಹಳಷ್ಟಿದೆ. ನಮ್ಮ ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ ಪಾಲು ಬರುವುದೇ ಎಂಬುದನ್ನು ನೋಡುತ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ತುಣುಕುಗಳನ್ನು ನಾನು ಕೇಳಿದೆ. ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ಗಮನ ಹರಿಸಿದ್ದಾರೆ. ಕರಾವಳಿ ಭಾಗದಲ್ಲಿ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮೆಡಿಕಲ್ ಟೂರಿಸಂ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಟೂರಿಸಂ ಗೈಡ್‌ಗಳಿಗೆ ತರಬೇತಿ ನೀಡುವ ಬಗ್ಗೆ ಹೇಳಿರುವುದನ್ನು ಸ್ವಾಗತಿಸುತ್ತೇನೆ. ಬೆಂಗಳೂರು ಫಾಸ್ಟ್ ಟ್ರೇನ್‌ ನಿರ್ಣಯವೂ ಸ್ವಾಗತಾರ್ಹ ಎಂದರು.ಆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಟ್ಯಾಕ್ಸ್ ರೆವಲ್ಯೂಷನ್ ಹೇಗೆ ಮಾಡುತ್ತಾರೆ ಎಂಬುದನ್ನು ನೋಡಬೇಕು. ನ್ಯಾಯ ಹೇಗೆ ಕೊಡ್ತಾರೆ? ಈಗಾಗಲೇ ಬರಬೇಕಿರುವ ಹಣವನ್ನು ಯಾವ ರೀತಿ ಪಾವತಿಸುತ್ತಾರೆ ಎಂಬ ಬಗ್ಗೆ ಸ್ಪಷ್ಟವಾಗಿ ಚಿತ್ರಣ ಬರಬೇಕು ಎಂದರು.ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಿಂದ ಎಸ್‌ಐಟಿ ರಚಿಸಿ ತನಿಖೆ ಮಾಡಲಾಗುತ್ತಿದೆ. ಸರ್ಕಾರದ ಬಗ್ಗೆ ಅನುಮಾನ ಬರಬಾರದು, ಎಸ್‌ಐಟಿ ವಾರ ಬಿಟ್ಟು ರಚನೆ ಮಾಡೋಕೆ ಬರಲ್ಲ. ಎಸ್‌ಐಟಿ ತಕ್ಷಣ ಮಾಡಬೇಕು. ಹಾಗಾದರೆ ಮಾತ್ರ ಸುಳ್ಳುಗಳು ಬೇಗ ಸಿಗುತ್ತವೆ. ನನಗೆ ಆ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲ, ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.ಲಕ್ಕುಂಡಿ ಉತ್ಖನನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಕ್ಕುಂಡಿಯಲ್ಲಿ ಬಂಗಾರಕ್ಕಾಗಿ ನಾವು ಉತ್ಖನನ ಮಾಡುತ್ತಿಲ್ಲ, ಅಲ್ಲಿ ಇರುವ ಕಲಾ ಸಂಪತ್ತು, ಇತಿಹಾಸ, ಅವಶೇಷಗಳನ್ನು ನೋಡುತ್ತಿದ್ದೇವೆ. ಹಿಂದೆ ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರ ಅರಸರವರೆಗೆ ಲಕ್ಕುಂಡಿ ಮಹತ್ವದ ಸ್ಥಳವಾಗಿತ್ತು. ಅದನ್ನು ನಾವು ಅನ್ವೇಷಣೆ ಮಾಡಿಸುತ್ತಿದ್ದೇವೆ. ಲಕ್ಕುಂಡಿಯಲ್ಲಿರುವ 101 ಗುಡಿ, ಬಾವಿಗಳನ್ನು ಹುಡುಕಾಟ ಮಾಡುತ್ತಿದ್ದೇವೆ ಎಂದು ಹೇಳಿದರು.