ಸಾರಾಂಶ
ದೇವರ ಹಿಪ್ಪರಗಿ : ನಮ್ಮ ಜಾಲಗೇರಿ ತಾಂಡಾದ ಹೆಸರನ್ನು ಬೆಳಗಿಸಿದ ಡಾ.ಅಶೋಕಕುಮಾರ ರಾ.ಜಾಧವ ನಮ್ಮ ಹೆಮ್ಮೆ ಮತ್ತು ಅಭಿಮಾನ ಎಂದು ವಿಜಯಪುರ ತಾಪಂ ಮಾಜಿ ಅಧ್ಯಕ್ಷ, ಗ್ರಾಮದ ಮುಖಂಡ ರಾಜು ವಾಚು ಜಾಧವ ಶ್ಲಾಘಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಅವರಿಗೆ ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ವತಿಯಿಂದ ನೀಡಲಾದ ರಾಜ್ಯಮಟ್ಟದ ಸುವರ್ಣ ಕನ್ನಡಿಗ ಪ್ರಶಸ್ತಿ ವಿಜೇತ ಹಾಗೂ ವಯೋ ನಿವೃತ್ತಿ ಹೊಂದಿದ ಕಾರಣ ಗುರುವಾರ ಅವರ ಸ್ವಗೃಹದಲ್ಲಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಮಾತನಾಡಿದರು.
ತಮ್ಮ ಪ್ರಾಮಾಣಿಕ ಪರಿಶ್ರಮ ಮತ್ತು ಕ್ರೀಡೆಯ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲರೂ ಅಭಿಮಾನ ಪಡುವಂತಹ ಕಾರ್ಯಗಳನ್ನೇ ಮಾಡಿದ್ದಾರೆ. ಇದು ಜಾಲಗೇರಿ ಗ್ರಾಮದ ಹೆಮ್ಮೆ ಆಗಿದೆ. ವಿಜಯಪುರದ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವಾಗ ತಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಏರ್ಪಡಿಸಿ, ಗ್ರಾಮದ ಜನರಿಗೆ ಹಲವು ಉಪಯುಕ್ತ ಚಟುವಟಿಕೆಗಳನ್ನು ಏರ್ಪಡಿಸಿದ್ದರು ಎಂದು ಹೇಳಿದರು.
ಅಲ್ಲದೇ ಲಯನ್ಸ್ ಪರಿವಾರ ಕ್ಲಬ್ಬಿನ ವತಿಯಿಂದ ತಾಂಡಾದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತವಾಗಿ ಔಷಧ ವಿತರಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಂಡಾದ ಜನರು ಈಗಲೂ ನೆನಪಿಸುತ್ತಾರೆ. ಇಂತಹವರು ಸರ್ಕಾರಿ ಸೇವೆಯಲ್ಲಿದ್ದರೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ ಎಂದು ಮೆಚ್ಚುಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಾಲಗೇರಿ ಗ್ರಾಪಂ ಸದಸ್ಯರಾದ ಮೋಹನ ಹುನ್ನು ಜಾಧವ ಮಾತನಾಡಿ, ಡಾ.ಅಶೋಕಕುಮಾರ ಅವರ ಸಾಮಾಜಿಕ ಕಾಳಜಿ ಹಾಗೂ ತಮ್ಮ ವೃತ್ತಿಯ ಬಗ್ಗೆ ಇರುವ ಪ್ರೀತಿಯಿಂದಲೇ ಇವತ್ತು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾಗಿ ನಮ್ಮ ತಾಂಡಾಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ತಾಂಡಾ ಗ್ರಾಮದ ಪ್ರಮುಖರಾದ ಮೇಘು ಗಂಗಾರಾಮ ಜಾಧವ, ಸಂತೋಷ ವಜ್ಜು ಜಾಧವ, ಪುತಳಾಬಾಯಿ ವಾಚು ಜಾಧವ, ಝೀಮಿಬಾಯಿ ರೋಹಿತ ನಾಯಕ, ಶಾರದಾ ವಸಂತ ನಾಯಕ, ಅಶೋಕ ವಾಚು ಜಾಧವ, ವಿಠ್ಠಲ ಶಂಕರ ಜಾಧವ, ಅನೀಲ ರಾಠೋಡ, ಥಾಪಿಬಾಯಿ ಅಮ್ಮು ಜಾಧವ, ಕೋಮಸಿಂಗ ಜಾಧವ, ವಿಠಲ ಕೋಮು, ದೇಸು ಮೇಘು, ರಾಮಕ್ಕ, ನಾಗೇಶ್ವರಿ ನಾಯಕ, ಡಾ.ಅಶೋಕಕುಮಾರ ಅವರ ಧರ್ಮ ಪತ್ನಿ ಭುವನೇಶ್ವರಿ, ಮಗಳು ಅಕ್ಷತಾ, ವೈಷ್ಣವಿ ನಾಯಕ ಅಲ್ಲದೇ ತಾಂಡಾದ ಇನ್ನೀತರ ಪ್ರಮುಖರು ಉಪಸ್ಥಿತರಿದ್ದು ಡಾ.ಜಾಧವ ದಂಪತಿಯನ್ನು ಸನ್ಮಾನಿಸಿದರು.