ದೇಶದ ಹಿಂದೂಗಳ ಸಂಕಷ್ಟಕ್ಕೆ ನಾವಿದ್ದೇವೆ

| Published : Jun 19 2025, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಭಾರತದಲ್ಲಿ ಯಾವುದೇ ಹಿಂದೂ ಸಂಕಷ್ಟದಲ್ಲಿದ್ದರೆ ಅವರ ಸಹಾಯಕ್ಕೆ ನಾವಿದ್ದೇವೆ. ದಿನದ 24 ಗಂಟೆಗಳ ಕಾಲ, ವರ್ಷ ಪೂರ್ತಿ ನಮ್ಮ ಕಾಲ್ ಸೆಂಟರ್ ಚಾಲ್ತಿಯಲ್ಲಿರುತ್ತದೆ. ದೇಶದ ಯಾವುದೇ ಮೂಲೆಯಲ್ಲಾದರೂ ಹಿಂದೂಗಳ ರಕ್ಷಣೆ ಮಾಡಲಿದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಹಾಗೂ ರಾಷ್ಟ್ರೀಯ ಬಜರಂಗ ದಳದ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರವೀಣ ಭಾಯಿ ತೊಗಾಡಿಯಾ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತದಲ್ಲಿ ಯಾವುದೇ ಹಿಂದೂ ಸಂಕಷ್ಟದಲ್ಲಿದ್ದರೆ ಅವರ ಸಹಾಯಕ್ಕೆ ನಾವಿದ್ದೇವೆ. ದಿನದ 24 ಗಂಟೆಗಳ ಕಾಲ, ವರ್ಷ ಪೂರ್ತಿ ನಮ್ಮ ಕಾಲ್ ಸೆಂಟರ್ ಚಾಲ್ತಿಯಲ್ಲಿರುತ್ತದೆ. ದೇಶದ ಯಾವುದೇ ಮೂಲೆಯಲ್ಲಾದರೂ ಹಿಂದೂಗಳ ರಕ್ಷಣೆ ಮಾಡಲಿದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಹಾಗೂ ರಾಷ್ಟ್ರೀಯ ಬಜರಂಗ ದಳದ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರವೀಣ ಭಾಯಿ ತೊಗಾಡಿಯಾ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 50 ವರ್ಷಗಳಿಂದ ಹಿಂದೂಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದೇನೆ. ಈಗ ಮೂರು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಹಿಂದೂ ಮಿಷನ್ ಸ್ಥಾಪನೆಗಾಗಿ ಸಂಚಾರ ನಡೆಸುತ್ತಿದ್ದೇನೆ. ಹಿಂದೂಗಳ ರಕ್ಷಣೆಗೆಂದೇ 2018ರಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಸ್ಥಾಪಿಸಿದ್ದು, ತೊಂದರೆ ಅಥವಾ ಅನ್ಯಾಯಕ್ಕೊಳಗಾದ ಹಿಂದೂಗಳು 020 66803300 ಸಂಖ್ಯೆಗೆ ಕರೆ ಮಾಡಬಹುದು ಎಂದು ನಂಬರ್ ನೀಡಿದರು.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಪ್ರತಿದಿನ 20 ಸಾವಿರದಂತೆ ಒಟ್ಟು 1.25 ಕೋಟಿ‌ ಜನರಿಗೆ ನಿರಂತರವಾಗಿ ಅಹಾರ ಪೂರೈಕೆ ಮಾಡಿದ್ದೇವೆ. ಜೊತೆಗೆ 5 ಲಕ್ಷ ಜನರಿಗೆ ವಸತಿ ವ್ಯವಸ್ಥೆ, 20 ಲಕ್ಷ ಕಂಬಳಿ ಪೂರೈಕೆ ಮಾಡಿದ್ದೇವೆ. 9 ಎಕರೆ ಪ್ರದೇಶದಲ್ಲಿ 14 ಅಡುಗೆ ತಯಾರಿಕಾ ಸ್ಥಳಗಳನ್ನು ಸ್ಥಾಪಿಸಿ ಯಾತ್ರಿಕರಿಗೆ ಸೇವೆ ಒದಗಿಸಿದ್ದಾಗಿ ತಿಳಿಸಿದರು.

ಹಿಂದೂಗಳ ಜನಸಂಖ್ಯೆ ಕಡಿಮೆ:

ಭಾರತದಲ್ಲಿ 1972ರಲ್ಲಿ ಹಿಂದೂಗಳ ಸಂಖ್ಯೆ ಶೇ.85ರಷ್ಟಿತ್ತು. ಇದೀಗ ಗಣನೀಯವಾಗಿ ಕಡಿಮೆಯಾಗಿದೆ. ಆಗ ಶೇ.6 ರಷ್ಟಿದ್ದ ಮುಸ್ಲಿಮರ ಸಂಖ್ಯೆ ಈಗ ಶೇ.15 ಆಗಿದೆ. ಹಿಂದೂಗಳ ರಾಷ್ಟ್ರ ಭಾರತದಲ್ಲೇ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಹೀಗಾಗಿ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಬೇಕು. ಅಕ್ರಮವಾಗಿ ಬಂದ ಬಾಂಗ್ಲಾ ನುಸುಳುಕೋರರನ್ನು ಭಾರತದಿಂದ ಓಡಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಆಪರೇಷನ್ ಸಿಂದೂರ ಇನ್ನೂ ಜಾರಿಯಲ್ಲಿದ್ದರೆ ಸಂತಸದ ವಿಚಾರ. ವಿಶ್ವದ ಮೂರನೇ ಬಲಿಷ್ಠ ಸೇನೆ ಭಾರತದ ಸೇನೆಯಾಗಿದ್ದು, ಅದರ ಮೇಲೆ ನಮಗೆ ವಿಶ್ವಾಸವಿದೆ. ನಮ್ಮ ಸೇನೆ ದೇಶದ ರಕ್ಷಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಆಂದೋಲನ:

ಇತ್ತೀಚೆಗೆ ಭಾರತದಲ್ಲಿ ರೈತರ ಖರ್ಚು ಹೆಚ್ಚಾಗುತ್ತಿದೆ. ಅವರು ಬೆಳೆದ ಬೆಳೆಗಳಿಗೆ ಮೌಲ್ಯ ಹೆಚ್ಚಾಗಬೇಕಿದೆ. ಕಳೆದ 20 ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬರುವ ದಿನಗಳಲ್ಲಿ 15 ರಿಂದ 20 ಲಕ್ಷ ರೈತರೊಂದಿಗೆ ಆಂದೋಲನ ಮಾಡಲಾಗುವುದು. ಭಾರತದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಈಗಿನ ಜನರ ಲೈಫ್ ಸ್ಟೈಲ್ ಕಾರಣವಾಗಿದ್ದು, ಪ್ರತಿವರ್ಷ ಒಂದು ಕೋಟಿ ಕುಟುಂಬಗಳು ಕಾಯಿಲೆಗಳ‌ ಖರ್ಚಿನಿಂದ ಬಳಲುತ್ತಿದ್ದಾರೆ. ಸ್ವಾಸ್ಥ್ಯ ಬದುಕು ಸಾಗಿಸುವುದು. ಉತ್ತಮ ಅಹಾರ ಸೇವಿಸುವುದು, 6 ರಿಂದ 8 ಗಂಟೆ ನಿದ್ರೆ ಮಾಡುವುದು. ನಿತ್ಯ ವ್ಯಾಯಾಮ, ಒತ್ತಡದಿಂದ ಮುಕ್ತರಾಗುವುದು. ಅಂದಾಗ ಮಾತ್ರ ಕಾಯಿಲೆಗಳು ಕಡಿಮೆಯಾಗಲಿವೆ ಎಂದರು.

ವಿಮಾನ ದುರಂತ ದುಃಖದ ವಿಚಾರ:

ಅಹಮದಾಬಾದ್ ವಿಮಾನ ದುರಂತ ಬಹಳ ದುಃಖದ ವಿಚಾರ. ಅವಘಡದ ಬಗ್ಗೆ ತನಿಖೆ ನಡೆದಿದೆ. ಆ ವೇಳೆ ನಿಜವಾಗಿಯೂ ಏನಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಅದರಲ್ಲಿದ್ದ ಇಬ್ಬರೂ ಪೈಲಟ್‌ಗಳು ಅನುಭವ ಉಳ್ಳವರಾಗಿದ್ದರು. ಯಾವ ಕಾರಣದಿಂದ ಹೀಗಾಯಿತು ಎಂಬುದು ತಿಳಿಯಬೇಕಿದೆ, ಅವಘಡದಲ್ಲಿ ಮೃತರಾದ ಗುಜರಾತನ ಮಾಜಿ ಸಿಎಂ ವಿಜಯ ರೂಪಾನಿ ನನಗೆ ಬಹಳ ಆತ್ಮೀಯರಾಗಿದ್ದರು. ಅವರು ನಾವು 1971ರಲ್ಲಿ ಒಟ್ಟಿಗೆ ಇರುತ್ತಿದ್ದೆವು ಎಂದು ಸ್ಮರಿಸಿದರು.

ಹಿಂದೂ ಪರ ಕೆಲಸಗಳಿಗೆ ಬೆಂಬಲ:

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಯಾರೇ ಹಿಂದುತ್ವದ ಪರವಾಗಿ ಕೆಲಸ‌ ಮಾಡಿದರೆ ಅವರಿಗೆ ನಾನು ಪ್ರಶಂಸಿಸುತ್ತೇನೆ. ಎಲ್ಲರೂ ಸಾಧ್ಯವಾದಷ್ಟು ಹಿಂದೂಗಳಿಗಾಗಿ ಶ್ರಮಿಸಿ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ರಮೇಶ ಕುಲಕರ್ಣಿ, ರಾಷ್ಟ್ರೀಯ ಕಾರ್ಯದರ್ಶಿ ಪ್ರದೀಪ ಗೌರ, ರಾಷ್ಟ್ರೀಯ ಬಜರಂಗದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಅಡ್ವಾನಿ ಉಪಸ್ಥಿತರಿದ್ದರು.

-----

ಕೋಟ್‌

ದೇಶದಲ್ಲಿ ಈಗಾಗಲೇ 30 ಸಾವಿರ ಹನುಮಾನ ಚಾಲಿಸಾ ಪಠಣ ಕೇಂದ್ರಗಳಿವೆ. ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಹನುಮಾನ ಚಾಲೀಸಾ ಕೇಂದ್ರಗಳನ್ನು ಸ್ಥಾಪನೆ ಮಾಡಲಿದ್ದೇವೆ. ಅವು ಹಿಂದೂ ಡೆವಲಪಮೆಂಟ್ ಸೆಂಟರ್‌ಗಳಾಗಿ ಕಾರ್ಯನಿರ್ವಹಿಸಲಿವೆ. ಹನುಮಾನ ಚಾಲಿಸಾ ಪಠಣ ಕೇಂದ್ರ ತೆರೆಯುವುದರಿಂದ ಗ್ರಾಮಗಳಲ್ಲಿ ನೂರಾರು ಕುಟುಂಬಗಳಿಗೆ ಸುರಕ್ಷವಾಗಲಿದೆ. ಅಲ್ಲಿನ ಜನರಿಗೆ ಸುಖ, ಸಮೃದ್ಧಿ, ಸಮ್ಮಾನ, ಸ್ವಾಸ್ತ್ಯ, ಸೇವಾ ಸೌಲಭ್ಯಗಳು ಸಿಗಲಿವೆ. ಮಕ್ಕಳ ಶಿಕ್ಷಣಕ್ಕಾಗಿ, ಮಹಿಳಾ ಸುರಕ್ಷತೆಗಾಗಿ, ವೈದ್ಯಕೀಯ ಸೇವೆಗಾಗಿ, ಕಾನೂನು ಸಹಾಯಕ್ಕಾಗಿ ನಮ್ಮಿಂದ ವಕೀಲರ ಸಹಾಯ ಸಿಗಲಿದೆ.

ಡಾ.ಪ್ರವೀಣ ಭಾಯ್‌ ತೊಗಾಡಿಯಾ, ಅಂತಾರಾಷ್ಟ್ರೀಯ ಹಿಂದೂ ಪರಿಷತ್‌ ಮುಖ್ಯಸ್ಥ-