ಕುವೆಂಪು ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆಯನ್ನು ಮರೆಮಾಚಿದ್ದೇವೆ. ಭಾರತ, ಕರ್ನಾಟಕ ತದ್ವಿರುದ್ಧವಲ್ಲ, ತಾಯಿ-ಮಗಳ ಹಾಗೆ ಎಂಬುದು ಕುವೆಂಪು ಅವರ ಸಾಹಿತ್ಯದಲ್ಲಿ ನೋಡಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಟಿ.ಎಲ್. ಪ್ರವೀಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆಯನ್ನು ಮರೆಮಾಚಿದ್ದೇವೆ. ಭಾರತ, ಕರ್ನಾಟಕ ತದ್ವಿರುದ್ಧವಲ್ಲ, ತಾಯಿ-ಮಗಳ ಹಾಗೆ ಎಂಬುದು ಕುವೆಂಪು ಅವರ ಸಾಹಿತ್ಯದಲ್ಲಿ ನೋಡಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಟಿ.ಎಲ್. ಪ್ರವೀಣ್ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವೃತ್ತಿಯ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಭಾನುವಾರ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆಯ ಸಮನ್ವಯತೆ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿ,

ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಅಸ್ಮಿತೆಗೆ ಹೋರಾಟ ನಡೆಯುತ್ತಿದ್ದ ಕಾಲಘಟ್ಟ ಕುವೆಂಪು ಅವರದ್ದು. ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ಅವರ ಸಾಲುಗಳೆ ಭಾರತ, ಕರ್ನಾಟಕ ತದ್ವಿರುದ್ಧವಲ್ಲ ಎಂಬ ನಿಲುವು ತೋರಿಸಿದೆ ಎಂದರು.

ಭಾರತದ ಐಕ್ಯತೆಗೆ ಅತ್ಯಂತ ಮುಖ್ಯವೆಂದು ಹೇಳಿದರು. ಕನ್ನಡಕ್ಕಾಗಿ ಕೈಎತ್ತಿ ಎಂದು ಹೇಳುವವರು ಮುಂದಿನದ್ದು ಭಾರತ ಎಂಬುದನ್ನು ಮರೆಯುತ್ತಿದ್ದಾರೆ, ಇದು ವಿಷಾದನೀಯ. ಕನ್ನಡಿಗ, ಭಾರತೀಯ ಎಂಬ ವಿಷಯ ಮುಖಾಮುಖಿ ಮಾಡುವ ಸಂದರ್ಭವೇ ಇಲ್ಲ. ಅದೊಂದು ವಿಭಜಿಸುವ ತಂತ್ರ, ಅದು ಬಾಲಿಶವಾದದು. ವೇದ, ಉಪನಿಷತ್ತುಗಳ ಮೂಲಕ ನಾವು ಇಲ್ಲಿಯವರೆಗೂ ಐಕ್ಯತೆ ಸಾಧಿಸುತ್ತಾ ಬಂದಿದ್ದೇವೆ ಅದರ ಮೂಲಕವೇ ನಾವು ಸಾಗಬೇಕು ಎಂದರು.

1960ರ ನಂತರದಲ್ಲಿ ಸೆಕ್ಯುಲರ್ ರಾಜಕೀಯದಡಿ ಕನ್ನಡ ಬೌದ್ಧಿಕ ಜಗತ್ತು ಅಸ್ಥಿತ್ವ ಕಾಣುವ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಸೀಮಿತಗೊಳಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಮೌಢ್ಯವಿದೆ ಎಂಬ ಸೆಕ್ಯುಲರ್‌ವಾದದ ಚಿಂತನೆಯ ವಿಚಾರವನ್ನ ಮಾತ್ರ ಮುಂದೆ ತರಲಾಯಿತು. ಆದರೆ ಕುವೆಂಪು ಅವರ ವೈಚಾರಿಕತೆಯೇ ಅದರಿಂದ ಭಿನ್ನವಾಗಿತ್ತು, ಮುನ್ನೆಲೆಗೆ ಬರಲೇ ಇಲ್ಲ ಎಂದರು.

ಸೈದ್ಧಾಂತಿಕವಾಗಿ ಕುವೆಂಪು ಅವರ ವಿಚಾರವನ್ನು ಮುನ್ನಲೆಗೆ ತರುವ ಕೆಲಸ ಆಗಬೇಕು. ಆಗ ಭಾರತದ ಅಸ್ಮಿತೆ ಎಲ್ಲರನ್ನೂ ತಲುಪುವುದು. ಆಸುರಿ ಸಾಹಿತ್ಯ, ದೈವೀ ಸಾಹಿತ್ಯ ಎಂಬುದರ ಸ್ಪಷ್ಟನೆ ಕೊಟ್ಟವರು ಕುವೆಂಪು ಅವರು ಅದನ್ನು ತಿಳಿದು ಸಾಗೋಣ ಎಂದು ಕರೆ ನೀಡಿದರು.

ಬೆಂಗಳೂರಿನ ಸಹಪ್ರಾಧ್ಯಾಪಕಿ ಡಾ. ಅಶ್ವಿನಿ ದೇಸಾಯಿ ಮಾತನಾಡಿ, ಕುವೆಂಪು ಅವರದ್ದು ಭಾರತ ಒಗ್ಗೂಡಿಸುವ ಕಾಲಘಟ್ಟ. ಯುರೋಪಿಯನ್, ಕಲೋನಿಯಲ್ ವಿಚಾರ ತಿರಸ್ಕರಿಸಿ ಭಾರತದ ರಾಷ್ಟ್ರೀಯತೆ ಮುಂದಿಡುವ ಪ್ರಯತ್ನವನ್ನು ಕುವೆಂಪು ಹಾಗೂ ಮಾಸ್ತಿ ಅವರು ಮಾಡಿದರು ಎಂದು ತಿಳಿಸಿದರು.

ರಾಷ್ಟ್ರೀಯತೆಯ ಕಲ್ಪನೆ ತಿಳಿಸುವ ಕೆಲಸ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಾಹಿತಿಗಳಿಗಿತ್ತು. ಅಜ್ಞಾನ ತೊರೆದು ಜ್ಞಾನದೆಡೆಗೆ ಸಾಗಿ ಎಂಬುದು ಕುವೆಂಪು ಸಾಹಿತ್ಯದಲ್ಲಿದೆ. ಸಂಸ್ಕೃತಿಯ ಹಿನ್ನೆಲೆಯ ದೃಷ್ಟಿಯಲ್ಲಿ ರಾಷ್ಟ್ರೀಯತೆ ಕಟ್ಟಿಕೊಳ್ಳಲು ಕುವೆಂಪು ಸಾಹಿತ್ಯ ಓದಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮನ್ವಯಕಾರರಾದ ರೋಹಿತ್ ಚಕ್ರತೀರ್ಥ ಇದ್ದರು.

----

ಪಾಶ್ಚಾತ್ಯ ದೇಶಗಳ ರಾಷ್ಟ್ರೀಯತೆಯಲ್ಲಿ ಜನಾಂಗ ಕಲ್ಪನೆ ಇವೆ. ಆದರೆ ಭಾರತದ ರಾಷ್ಟ್ರೀಯತೆ ಎಂಬುದು ಇಡೀ ಭಾರತೀಯತೆಯ ಐಕ್ಯತೆಯ ಸತ್ವ, ಆಧ್ಯಾತ್ಮ, ಪರಂಪರೆ ಹಾಗೂ ಸಂಸ್ಕೃತಿ ಎನ್ನುವ ಮೂಲಕ ತೆರೆದಿಟ್ಟವರು ಕುವೆಂಪು. ಮಿತಿಗಳನ್ನು ಮೀರಿದಾಗ ಮಾತ್ರ ಉನ್ನತಿ ಸಾಧ್ಯ ಎಂದವರು ಕುವೆಂಪು. ಪ್ರಗತಿಪರರು ಕುವೆಂಪು ಅವರ ಹೆಸರು ಬಳಸಿ ಅವರ ವಿಚಾರವನ್ನು ಮಂಡಿಸುವ ಕಾರ್ಯವನ್ನು ಸದಾ ಮಾಡಿದರು. ಆದರೆ ಕುವೆಂಪು ಸಾಹಿತ್ಯದ ನೈಜತೆಯನ್ನು ಮರೆಮಾಚಿದರು.

-ಡಾ.ಟಿ.ಎಲ್. ಪ್ರವೀಣ್, ಸಹಪ್ರಾಧ್ಯಾಪಕ ದಾವಣಗೆರೆ ವಿಶ್ವವಿದ್ಯಾಲಯ.

-----

ರಾಷ್ಟ್ರೀಯ ಪ್ರಜ್ಞೆ ಹಾಗೂ ಸಂಸ್ಕೃತಿಯ ಪ್ರಜ್ಞೆಯನ್ನು ಕುವೆಂಪು ಅವರು ಸಾಹಿತ್ಯದಲ್ಲಿ ತೋರಿಸಿದರು. ರಾಷ್ಟ್ರೀಯತೆ ಹಾಗೂ ಕನ್ನಡದ ಮೇಲಿನ ಅವರ ಪ್ರೇಮವನ್ನು ವೈರುದ್ಯವಾಗಿ ಪ್ರದರ್ಶಿಸಲಾಗಿದೆ. ವ್ಯವಸ್ಥಿತವಾಗಿ ಅದನ್ನು ಮುಗಿಸಲಾಗಿದೆ. ಭಾರತೀಯ ಸಂಸ್ಕೃತಿಯ ಚಿತ್ರಣವನ್ನು ಕುವೆಂಪುರವರು ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನೇ ಅವರು ರಾಷ್ಟ್ರೀಯತೆ ಎಂದಿರಬಹುದು.

-ಡಾ. ಅಶ್ವಿನಿ ದೇಸಾಯಿ, ಸಹಪ್ರಾಧ್ಯಾಪಕಿ.