ಪ್ರಹ್ಲಾದ ಜೋಶಿ ಅಭ್ಯರ್ಥಿಯಾಗಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ: ಮೂಜಗು

| Published : Mar 30 2024, 12:58 AM IST

ಪ್ರಹ್ಲಾದ ಜೋಶಿ ಅಭ್ಯರ್ಥಿಯಾಗಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ: ಮೂಜಗು
Share this Article
  • FB
  • TW
  • Linkdin
  • Email

ಸಾರಾಂಶ

2 ದಿನಗಳ ಹಿಂದೆ ನಗರದ ಮೂರುಸಾವಿರ ಮಠದಲ್ಲಿ ನಡೆದ ಲಿಂಗಾಯತ ಮಠಾಧೀಶರ ಚಿಂಥನ ಮಂಥನ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಈಗ ಜ.ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಅಪಸ್ವರವೆತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

2 ದಿನಗಳ ಹಿಂದೆ ನಗರದ ಮೂರುಸಾವಿರ ಮಠದಲ್ಲಿ ನಡೆದ ಲಿಂಗಾಯತ ಮಠಾಧೀಶರ ಚಿಂಥನ ಮಂಥನ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಈಗ ಜ.ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಅಪಸ್ವರವೆತ್ತಿದ್ದಾರೆ.

ಪ್ರಹ್ಲಾದ ಜೋಶಿ ಅವರು ಅಭ್ಯರ್ಥಿಯಾಗಿದ್ದಕ್ಕೆ ನಮ್ಮ ಅಪಸ್ವರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಠದಲ್ಲಿ 2 ದಿನದ ಹಿಂದೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಚಿಂಥನ ಮಂಥನ ಸಭೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಜೋಶಿಗೆ ನೀಡಿರುವ ಟಿಕೆಟ್‌ನ್ನು ಬಿಜೆಪಿ ವರಿಷ್ಠರು ಮಾ.31ರೊಳಗೆ ಬದಲಿಸಬೇಕು. ಇಲ್ಲದಿದ್ದರೆ ಏ.2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಮೂಜಗು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಸೇರಿದಂತೆ 40ಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಪಾಲ್ಗೊಂಡಿದ್ದರು. ಆದರೆ, ಮೂರುಸಾವಿರ ಮಠದ ಶ್ರೀಗಳು ಶುಕ್ರವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಪತ್ರದಲ್ಲೇನಿದೆ?:

ಪ್ರಹ್ಲಾದ ಜೋಶಿಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ. ಶ್ರೀಮಠವು ಯಾವಾಗಲೂ ರಾಜಕೀಯ ಅಂತರ ಕಾಯ್ದುಕೊಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ಸಮನಾಗಿ ಕಾಣುತ್ತಾ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಾರೆ. ಸರ್ವರನ್ನು ಸಮಭಾವದಿಂದ ಕಾಣುವುದು ಮಠದ ಸದ್ಭಾವನೆಯಾಗಿದೆ. ಯಾವಾಗಲೂ ಮಠವು ರಾಜಕೀಯ ಪ್ರೇರಿತ ಹೇಳಿಕೆ ಕೊಟ್ಟಿಲ್ಲ ಮತ್ತು ಕೊಡುವುದೂ ಇಲ್ಲ. ಇಂದಿಗೂ ಅದನ್ನು ನಾವು ಕಾಯ್ದುಕೊಂಡು ಬಂದಿದ್ದೇವೆ. ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆ ಆ ಪಕ್ಷದ ಕಾರ್ಯಕರ್ತರು ಮತ್ತು ವರಿಷ್ಠರಿಗೆ ಸಂಬಂಧಪಟ್ಟದ್ದು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಯ್ಕೆಗೆ ವಿರೋಧ ಇಲ್ಲ. ಅವರ ಮತ್ತು ನಮ್ಮ ನಡುವೆ ವೈಯಕ್ತಿಕವಾಗಿ ಬಾಂಧವ್ಯ ತುಂಬಾ ಚೆನ್ನಾಗಿದೆ. ಜೋಶಿ ಅವರು ಕೂಡಾ ಮಠದೊಡನೆ ಸೌಹಾರ್ದಯುತವಾಗಿ ಸದಾ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ ಎಂದು ಅಧಿಕೃತವಾಗಿರುವ ಪತ್ರ ಶ್ರೀಮಠದಿಂದ ಬಿಡುಗಡೆಯಾಗಿದೆ.