ಸಾರಾಂಶ
- ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸೋಮನಗೌಡ ಸಲಹೆ - - - ಕನ್ನಡಪ್ರಭ ವಾರ್ತೆ ನ್ಯಾಮತಿ
ಭಾರತದಲ್ಲಿ 520 ಸಂಸ್ಥಾನಗಳಿದ್ದು, ಅದರಲ್ಲಿ ಕಿತ್ತೂರು ಸಹ ಒಂದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ, ಸ್ವಾತಂತ್ರ ತಂದು ಕೊಟ್ಟ ಧೀರ ಮಹಿಳೆ. 2ಎ ಮೀಸಲಾತಿಗಾಗಿ ರಾಣಿ ಚೆನ್ನಮ್ಮನಂತೆ ಎಲ್ಲರೂ ಧೈರ್ಯಶಾಲಿಯಾಗಿ ಹೋರಾಡಬೇಕಾಗಿದೆ. ಈ ಹೋರಾಟ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಾವೆಲ್ಲ ಒಗ್ಗಟ್ಟಾಗಿ ಸಮಾಜಕ್ಕೆ ಶಕ್ತಿ ನೀಡಬೇಕು ಎಂದು ವೀ.ಲಿಂ.ಪಂ. ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಮಾಲಿ ಪಾಟೀಲ್ ಹೇಳಿದರು.ಪಟ್ಟಣದ ಶ್ರೀ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ಪ್ರಾರಂಭವಾಗಿ 31 ವರ್ಷವಾಯಿತು. 6 ಜನ ರಾಜ್ಯಾಧ್ಯಕ್ಷರಾಗಿ ಹೋಗಿದ್ದಾರೆ. ನಾನು 7ನೇ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಸಮಾಜ ಕಟ್ಟುವ ಸಲುವಾಗಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ದೊಡ್ಡ ಸಮಾಜವಾಗಿದೆ. ನಾವು ರಾಜಕೀಯದಲ್ಲಿ ಮುಂದುವರಿಯಲು ನಮ್ಮ ಸಮಾಜದಿಂದಲೇ ಶಾಸಕರಾಗಿ ಚುನಾಯಿತರಾಗಬೇಕು ಎಂದರು.ಹರಿಹರ ಪಂಚಮಸಾಲಿ ಪೀಠಕ್ಕೆ ನೀವೆಲ್ಲ ಒಂದು ಕೆಜಿ ಅಕ್ಕಿ ನೀಡಿ. ಪೀಠಕ್ಕೆ ಯಾವುದೇ ಸಮಾಜದವರು ಬಂದರೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಮಹಿಳೆಯರಿಗಾಗಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಹರಿಹರ ಪಂಚಮಸಾಲಿ ಪೀಠದ ಮಠವನ್ನು ಸುಮಾರು ₹30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಕರ್ನಾಟಕದಲ್ಲಿ ನಂ.1 ಪೀಠವಾಗಬೇಕು ಎಂದು ಹೇಳಿದರು.
ಉಪನ್ಯಾಸಕ ಎಚ್.ಬಿ. ಅಶೋಕ್, ಸಮಾಜದ ಮುಖಂಡ ಹಲಗೇರಿ ವೀರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟಣಶೆಟ್ಟಿ ಪರಮೇಶ್ವರಪ್ಪ, ಸಿ.ಕೆ.ರವಿಕುಮಾರ, ಚೈತ್ರಾ ತಿಪ್ಪೇಸ್ವಾಮಿ ಮಾತನಾಡಿದರು.ಅಧ್ಯಕ್ಷತೆಯನ್ನು ಸಮಾಜದ ನ್ಯಾಮತಿ ತಾಲೂಕು ಅಧ್ಯಕ್ಷ ಪೂಜಾರ್ ಚಂದ್ರಶೇಖರ್ ವಹಿಸಿದ್ದರು. ಪಂಚಮಸಾಲಿ ಸಮಾಜದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ಮೆರವಣಿಗೆ ನಡೆಯಿತು. ಜಿಲ್ಲಾ ಗೌರವಾಧ್ಯಕ್ಷ ಎನ್.ಡಿ.ಪಂಚಾಕ್ಷರಪ್ಪ, ಎನ್.ಡಿ. ಮಂಜುನಾಥ, ಎನ್.ಜೆ.ವಾಗೀಶ್, ನುಚ್ಚಿನ ನಾಗರತ್ನ, ನುಚ್ಚಿನ ಪ್ರಭಾ ಮುರುಗೇಶಪ್ಪ, ವೀರಣ್ಣ ಪಟ್ಟಣ ಶೆಟ್ಟಿ, ವನಜಾಕ್ಷಮ್ಮ, ಬಿ.ಆರ್.ಹಾಲೇಶ್, ಎಸ್.ಬಿ. ಜಯಪ್ಪ, ವಿ.ಬಿ.ಪಾಟೀಲ್, ಎಚ್.ವಿ. ರುದ್ರೇಶ್ ಮತ್ತು ಸಮಾಜದ ಮುಖಂಡರು ಮತ್ತಿತರರಿದ್ದರು.- - - -5624202428_524.JPG:
ಸಮಾರಂಭವನ್ನು ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಮಾಲಿ ಪಾಟೀಲ್ ಉದ್ಘಾಟಿಸಿದರು.