ವಿಕೃತಿ ತೊಡೆದು ಜಾಗೃತಿ ಮೂಡಿಸಬೇಕಿದೆ: ಸುಚೇಂದ್ರ ಪ್ರಸಾದ್

| Published : Oct 28 2024, 12:45 AM IST

ಸಾರಾಂಶ

ಚಿಕ್ಕಮಗಳೂರು , ಪರಿಸರ ಸೇರಿದಂತೆ ಪರಿವರ್ತನೆ ಆಗಬೇಕಿರುವ ವಿಚಾರಗಳಲ್ಲಿ ದೇಶ ಇಂದು ಘನ ಘೋರ ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ವಿಕೃತಿಯನ್ನು ತೊಡೆದು ಹಾಕಿ ಪ್ರತೀ ವ್ಯಕ್ತಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಹಾಗೂ ಚಿತ್ರನಟ, ನಿರ್ದೇಶಕ ಕೆ. ಸುಚೇಂದ್ರ ಪ್ರಸಾದ್ ಹೇಳಿದರು.

ಸಂಸ್ಕಾರ ಭಾರತಿ ಆಶ್ರಯದಲ್ಲಿ ಪಂಚ ಪರಿವರ್ತನೆ-ಒಂದು ಅವಲೋಕನ: ಸಂವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಿಸರ ಸೇರಿದಂತೆ ಪರಿವರ್ತನೆ ಆಗಬೇಕಿರುವ ವಿಚಾರಗಳಲ್ಲಿ ದೇಶ ಇಂದು ಘನ ಘೋರ ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ವಿಕೃತಿಯನ್ನು ತೊಡೆದು ಹಾಕಿ ಪ್ರತೀ ವ್ಯಕ್ತಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಹಾಗೂ ಚಿತ್ರನಟ, ನಿರ್ದೇಶಕ ಕೆ. ಸುಚೇಂದ್ರ ಪ್ರಸಾದ್ ಹೇಳಿದರು.

ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಸಂಸ್ಕಾರ ಭಾರತಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಚ ಪರಿವರ್ತನೆ-ಒಂದು ಅವಲೋಕನ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಪಂಚ ಪರಿವರ್ತನೆಗಳಾದ ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಚಿಂತನೆ, ಪರ್ಯಾವರಣ ಮತ್ತು ನಾಗರಿಕ ಕರ್ತವ್ಯ, ಈ ಪಂಚ ಸೂತ್ರಗಳ ಮೂಲಕ ದೇಶದಲ್ಲಿ ಪರಿವರ್ತನೆ ತರಲು ಸಾಧ್ಯ. ಚರ್ಚೆಗಿಂತ ಮುಖ್ಯವಾಗಿ ಕಟಿಬದ್ಧರಾಗಿ ಕೆಲಸ ಮಾಡಲು ನಾವು ಸ್ವತಃ ಮುಂದಾಗಬೇಕಾಗಿದೆ ಎಂದು ತಿಳಿಸಿದರು. ಈ ಪಂಚ ಸೂತ್ರಗಳನ್ನು ರೂಢಿಸಿಕೊಂಡು ಪ್ರತೀ ವ್ಯಕ್ತಿಯಿಂದ ಅದು ಆರಂಭವಾಗಬೇಕಾಗಿದೆ. ಕೇವಲ ಸಲಹೆ ಸೂಚನೆಗೆ ಸೀಮಿತವಾಗದೆ ಮಿತಿ ಮೀರಿರುವ ಈ ವ್ಯವಸ್ಥೆಯಲ್ಲಿ ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ದಾಪುಗಾಲು ಹಾಕುವ ಸ್ಥಿತ್ಯಂತರದ ಸಂದರ್ಭದಲ್ಲಿ ನಾವಿದ್ದು, ಕಾರ್ಯೋ ನ್ಮುಖರಾಗಲು ಮುಂದಾಗಬೇಕು ಎಂದರು.

ಪಂಚ ಸೂತ್ರಗಳ ಬಗ್ಗೆ ವರ್ಣ ಪಾರದರ್ಶಿಕೆಯೊಂದಿಗೆ ವಿವರಣೆ ನೀಡಿದ ಚಿಕ್ಕಮಗಳೂರು ಸಂಸ್ಕಾರ ಭಾರತಿಯ ಗೌರವಾಧ್ಯಕ್ಷ ನಾಯಕ್ ಸಚ್ಚಿದಾನಂದ, ಮೊದಲು ವ್ಯಕ್ತಿ ಬದಲಾಗಬೇಕು. ವ್ಯಕ್ತಿ ಬದಲಾದಾಗ ಒಂದು ಕುಟುಂಬವೂ ಬದಲಾಗುತ್ತದೆ. ಕುಟುಂಬವನ್ನು ಅಸ್ತಿಭಾರ ಶಿಲೆಯಾಗಿಸಿಕೊಂಡು ಸಾಮಾಜಿಕ ಸಾಮರಸ್ಯ, ಕೌಟುಂಬಿಕ ಮೌಲ್ಯಗಳನ್ನು ಸದೃಢಗೊಳಿಸಲು ಕುಟುಂಬ ಪ್ರಬೋಧನವನ್ನು ಯಾವ ರೀತಿ ತರಬಹುದು ಹಾಗೂ ನಮ್ಮತನದ ಅರಿವು ಮೂಡಿಸುವ ಸ್ವದೇಶಿ ಚಿಂತನೆ ಮತ್ತು ಸಂವಿಧಾನ ನೀಡಿರುವ ನಾಗರಿಕ ಕರ್ತವ್ಯಗಳ ಪಾಲನೆ ಜೊತೆಗೆ ಪರಿಸರದ ಮೇಲೆ ಆಗುತ್ತಿರುವ ಹಾನಿಯನ್ನು ವ್ಯಕ್ತಿಗತವಾಗಿ ಹಾಗೂ ಸಾಮೂಹಿಕವಾಗಿ ತಡೆಗಟ್ಟುವ ಬಗ್ಗೆ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.

ನೀರನ್ನು ಸಂಗ್ರಹದ ದೃಷ್ಟಿಯಿಂದ ಮಾತ್ರ ಉಳಿಸುವುದಲ್ಲ, ಮಾಲಿನ್ಯವಿಲ್ಲದಂತೆ ಪವಿತ್ರವಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಷ್ಟೋ ನದಿಗಳು ನದಿಗಳಾಗಿ ಉಳಿದಿಲ್ಲ. ಸಮುದ್ರವನ್ನೂ ಸೇರುತ್ತಿಲ್ಲ. ನದಿ ಎನ್ನುವುದರ ವ್ಯಾಖ್ಯಾನವೇ ನಿರಂತರವಾಗಿ ಹರಿಯುತ್ತಿರಬೇಕೆಂದಿದೆ. ಅವು ವರ್ಷ ಪೂರ್ತಿ ಹರಿದು ಸಮುದ್ರವನ್ನು ಸೇರಬೇಕು. ಆದರೆ, ಹಾಗೆ ಆಗುತ್ತಿಲ್ಲ. ಪ್ರಾಯಶಃ ಉತ್ತರ ಭಾರತದ ಗಂಗಾ, ಬ್ರಹ್ಮಪುತ್ರ, ಯಮುನಾ ಬಿಟ್ಟು ಇನ್ಯಾವ ನದಿಗಳು ನದಿಗಳಾಗಿ ಉಳಿದಿಲ್ಲ. ಕಾವೇರಿ, ಕೃಷ್ಣಾ, ಗೋದಾವರಿ, ವರ್ಷದಲ್ಲಿ ಎರಡೂವರೆ ತಿಂಗಳ ಕಾಲ ಸಮುದ್ರ ಸೇರುತ್ತಿಲ್ಲ. ಹೆಸರಿಗೆ ಮಾತ್ರ ನದಿಗಳಾಗಿದ್ದು, ಆ ಎರಡೂವರೆ ತಿಂಗಳ ಅವಧಿಯಲ್ಲಿ ಒಣಗಿ ಹೋಗುತ್ತಿವೆ. ತುಂಗಾಭದ್ರಾ ನದಿ ಮಾಲಿನ್ಯ ತುಂಬಿ ಅಕ್ಷರಶಃ ಚರಂಡಿ ಯಂತಾಗಿದೆ ಎಂದು ಹೇಳಿದರು.

ಪರಿಸರ ಪ್ಲಾಸ್ಟಿಕ್‌ಮಯವಾಗಿ ಸಹಸ್ರಾರು ಪ್ರಾಣಿ ಪಕ್ಷಿಗಳು ಅವುಗಳನ್ನು ಸೇವಿಸಿ ಪ್ರಾಣ ನೀಗಿವೆ. ನಾವು ತಿಂದೆಸೆದ ಆಹಾರ ತ್ಯಾಜ್ಯದಲ್ಲಿರುವ ಎಂಜಲೆಲೆಯ ಜೊತೆಗೆ ಪ್ಲಾಸ್ಟಿಕ್ ಅನ್ನು ಸೇವಿಸಿ ಹಸುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹಾಗೆಯೇ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಸೇರಿದಲ್ಲಿ ಜಲಚರಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮನುಷ್ಯನಿಲ್ಲದೆ ಇದ್ದರೂ ಇಡೀ ಪ್ರಪಂಚ ಉತ್ತಮವಾಗಿಯೇ ಇರಬಲ್ಲುದು. ಆದರೆ, ಪ್ರಾಣಿ ಪಕ್ಷಿಗಳಿಲ್ಲದೆ ಮನುಷ್ಯ ಇರಲು ಸಾಧ್ಯವೇ ಇಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡಲು ಅಳಿಲು ಸೇವೆಯನ್ನು ನಾವು ಇಂದಿನಿಂದಲೇ ಆರಂಭಿಸಬೇಕು ಎಂದು ತಿಳಿಸಿದರು.

ವಿದುಷಿ ಡಾ.ಕೃಪಾ ಫಡ್ಕೆ, ಪ್ರಾಂತ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಕಾರ್ಯಕ್ರಮದಲ್ಲಿದ್ದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಂಸ್ಕಾರ ಭಾರತಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದಿನೇಶ್ ಪಟೇಲ್‌ ಮಾತನಾಡಿದರು. ಪ್ರಾಂತ ಸಹ ಕಾರ್ಯದರ್ಶಿ, ಗಾಯಕಿ ರೇಖಾ ಪ್ರೇಮ್‌ಕುಮಾರ್‌, ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಇದ್ದರು. 27 ಕೆಸಿಕೆಎಂ 2ಚಿಕ್ಕಮಗಳೂರಿನ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಸಂಸ್ಕಾರ ಭಾರತಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಚ ಪರಿವರ್ತನೆ-ಒಂದು ಅವಲೋಕನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಕೆ.ಸುಚೇಂದ್ರ ಪ್ರಸಾದ್ ಮಾತನಾಡಿದರು.