ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮನುಷ್ಯರನ್ನು ಮನುಷ್ಯರಂತೆ ಕಾಣುವ ಗುಣ ಬೆಳೆಸಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಬದುಕು ಬೇರೆ ಯಾವ ವಿಶ್ವ ವಿದ್ಯಾಲಯಗಳಲ್ಲಿ ದೊರೆಯುವುದಿಲ್ಲ. ನಮ್ಮ ಮಕ್ಕಳಿಗೆ ಸಂಸ್ಕಾರ, ನೀತಿ ಪಾಠ, ಪ್ರೀತಿ, ವಾತ್ಸಲ್ಯ ಮೂಲಕ ಬೆಳೆಸಬೇಕಿದೆ. ಅಂದಾಗ ಉತ್ತಮ ಸಮಾಜ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ ಹೇಳಿದರು.ಇಲ್ಲಿನ ಕನ್ನಡ ಸಾಹಿತ್ಯ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಲಾವಿದರು, ಸಾಹಿತಿಗಳು, ಪತ್ರಕರ್ತರು ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ಉತ್ತರದ ಸಾಲು ದೀಪಗಳು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಂದೆ, ತಾಯಿಗಳ ನೆರಳಿನಲ್ಲಿ ಬೆಳೆಯಬೇಕು. ಸಾಮಾನ್ಯ ಶಾಲೆಗಳಲ್ಲಿ ಓದಬೇಕು. ಬೆಂಗಳೂರು, ಮಂಗಳೂರು, ಮುಂಬಯಿ ಸೇರಿದಂತೆ ನಾನಾ ಭಾಗಕ್ಕೆ ಬೋರ್ಡಂಗ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಹೀಗಾಗಿ ವಯಸ್ಸಾದ ಬಳಿಕ ತಂದೆ, ತಾಯಿಗಳ ನೋವು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಎನ್ನುವ ಜಾದಪದ ಗೀತೆ, ತಾಯಂದಿರ ಜೋಗುಳ ಪದಗಳು ಮಾಯವಾಗ ತೊಡಗಿವೆ. ಇದರಿಂದ ಕರಳು ಬಳ್ಳಿಯ ಸಂಬಂಧಗಳಲ್ಲಿ ಗಟ್ಟಿತನ ಉಳಿಯುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದರು.ಉತ್ತರದ ಸಾಲು ದೀಪಗಳು ಕೃತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ದಿಗ್ಗಜ ಪತ್ರಕರ್ತರ ಸೇವೆ, ಕಾರ್ಯಗಳನ್ನು ಬಿಚ್ಚಿಟ್ಟಿರುವುದು ಸಂತಸದ ಸಂಗತಿ. ಆದರೆ ಇಂದು ಸುದ್ದಿಗಳಲ್ಲಿ ಮನುಷ್ಯರನ್ನು ಮನುಷ್ಯರಾಗಿ ಕಾಣುತ್ತಿಲ್ಲ. ಸುದ್ದಿಗಳಲ್ಲಿ ಗೌರವ ಕಾಣುತ್ತಿಲ್ಲ. ಯಾವಾಗ, ಯಾರನ್ನು ಬೇಕಾದರೂ ಹೀರೋ, ಜೀರೋ ಮಾಡ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ನಾಡು ಕಟ್ಟಲು ಪ್ರಮುಖ ಪಾತ್ರವಹಿಸಿದ ಮಾಧ್ಯಮದ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ದಿಶೆಯಲ್ಲಿ ನೂರು ಜನ ಮಧ್ಯಮ ದಿಗ್ಗಜರ ಬದುಕನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಡುವ ಮೂಲಕ ಹಿರಿಯ ಪರ್ತಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಈ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಮಾಧ್ಯಮ ಕ್ಷೇತ್ರ ಇಂದು ಸೇವೆ, ಕರ್ತವ್ಯವಾಗಿ ಉಳಿಯುತ್ತಿಲ್ಲ. ಸತ್ವ ಹೀನವಾದ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯವಾಗುತ್ತಿಲ್ಲ. ಜನರ ಜೀವನ ಚಿಂತನೆಗಳಪರ ಇರುವ ವಿಷಯಕ್ಕೆ ಮಹತ್ವ ನೀಡಬೇಕಿದೆ. ಜಾತಿ, ಧರ್ಮ, ಮರ್ಯಾದೆ ಹತ್ಯೆ ಅಂತಹ ಸುದ್ದಿಗಳು ವಿಜೃಂಭಿಸುತ್ತಿವೆ. ಮನೆಯಲ್ಲಿ ತಂದೆ, ತಾಯಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾ ಕುಳಿತುಕೊಂಡರೆ ಮಕ್ಕಳಿಗೆ ಪಾಠ ಹೇಳುವವರು ಯಾರು? ನಿತ್ಯ ಒಂದು ಗಂಟೆಗಳ ಕಾಲ ಮಕ್ಕಳ ಜೊತೆಗೆ ಪಾಲಕರು, ಪೋಷಕರು ಕಾಲ ಕಳೆಯಬೇಕು ಎಂದರು.ಉದ್ಯಮಿ ಲಕ್ಷ್ಮಣ ನಿರಾಣಿ ಮಾತನಾಡಿ, ಯಾವುದೇ ಸರ್ಕಾರ ಇರಲಿ ಸಾಹಿತ್ಯ, ಪತ್ರಕರ್ತರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಯಾರಿಗೂ ಸಾಹಿತಿಗಳು, ಪತ್ರಕರ್ತರು ಕೈ ಚಾಚುವಂತಾಗಬಾರದು. ಸಮಾಜದಲ್ಲಿ ಈ ಇಬ್ಬರು ಕನ್ನಡಿ ಇದ್ದಂತೆ. ಅವರಿಗೆ ಗೌರವ ಸಲ್ಲುವ ಕೆಲಸವಾಗಬೇಕು ಎಂದ ಅವರು, ಮಗ ಉದ್ಯಮಿ, ದೊಡ್ಡ ಅಧಿಕಾರಿ ಆಗಬೇಕು ಎಂದು ತಂದೆ, ತಾಯಿಗಳು ಬಯಸುತ್ತಾರೆ. ಆದರೆ ಸಮಾಜಕ್ಕೆ ಉತ್ತಮ ನಾಗರಿಕನಾಗುವಂತೆ ನೀತಿ ಪಾಠ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರವಾಡ ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿದರು. ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಜಿಲ್ಲೆಯ ಕಲಾವಿದರ, ಪರ್ತಕರ್ತರ, ಸಾಹಿತಿಗಳ, ಸಂಘಟಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದಲಬಂಜನ್, ರಾಜ್ಯ ಕಾರ್ಯಕಾರಿನಿ ಸದಸ್ಯ ಮಹೇಶ ಅಂಗಡಿ, ಆನಂದ ಹಲಕುರ್ಕಿ ಇದ್ದರು.ಕಾರ್ಯಕ್ರಮದಲ್ಲಿ ಆನಂದ ಹಲಕುರ್ಕಿ, ಸಿ.ಎಂ.ಜೋಶಿ, ಮಲ್ಲಿಕಾರ್ಜುನ ಹೆಗ್ಗಳಿಗಿ, ಪೀರಪ್ಪ ಮ್ಯಾಗೇರಿ, ಪ್ರಿಯಾ ಕಟ್ಟಿ, ಉಮಾ ಕಾತರಕಿ ವಿಜಯಶ್ರೀ ಮುರನಾಳ ಇದ್ದರು. ಸಿ.ಎಸ್. ನಾಗನೂರ, ಶಿವಾನಂದ ಪೂಜಾರ ನಿರೂಪಿಸಿದರು. ಆರ್.ಸಿ.ಚಿತ್ತವಾಡಗಿ, ವಂದಿಸಿದರು.
--ಕೋಟ್ಪಾಲಕರು ಮಕ್ಕಳಿಗೆ ಇಂಜಿನಿಯರ್ , ವಿಜ್ಞಾನಿಗಳು, ಡಾಕ್ಟರ್, ಐಎಎಸ್, ಕೆಎಎಸ್ ಅಧಿಕಾರಿಗಳು ಆಗಬೇಕು ಎಂದು ಕನಸು ಕಾಣುತ್ತೀರಾ? ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ, ಸಮಾಜ ಸೇವೆ ಮಾಡುವ ಪತ್ರಕರ್ತರಾಗಲಿ ಎಂದು ಮನೋಭಾವನೆ ಮಕ್ಕಳಲ್ಲಿ ಬಿತ್ತಬೇಕು. ಗ್ರಾಮ, ನಗರಗಳಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅದಕ್ಕೆ ಸಾರ್ವಜನಿಕರು ಧ್ವನಿಯಾಗಿ ನಿಲ್ಲಬೇಕು. ಪತ್ರಿಕೆಗಳು ಉಳಿಯಲು ಪ್ರತಿಯೊಬ್ಬರು ಪತ್ರಿಕೆ ಕೊಂಡು ಓದಿ ಬೆಂಬಲಿಸಬೇಕು. ಬಾಗಲಕೋಟೆ ಜಿಲ್ಲೆ ಮಾಧ್ಯಮ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಈ ಕೃತಿಯು ಹುಬ್ಬಳ್ಳಿ- ಧಾರವಾಡ ಒಳಗೊಂಡು ಉತ್ತರ ಕರ್ನಟಕದ ಹೆಸರಾಂತ ಪತ್ರರ್ಕತರ ನೆನಪಿನ ಬುತ್ತಿಯಾಗಿದೆ. ನೋವುಂಡವರ, ಸರ್ಕಾರಕ್ಕೆ ನಿಮ್ಮ ನೋವು ತಿಳಿಸಿದವರ ಕತೆಯಾಗಿದೆ..ಮಲ್ಲಿಕಾರ್ಜುನ ಸಿದ್ದಣ್ಣವರ ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರುಪಾಲಕರು ಮಕ್ಕಳಿಗೆ ಇಂಜಿನಿಯರ್ , ವಿಜ್ಞಾನಿಗಳು, ಡಾಕ್ಟರ್, ಐಎಎಸ್, ಕೆಎಎಸ್ ಅಧಿಕಾರಿಗಳು ಆಗಬೇಕು ಎಂದು ಕನಸು ಕಾಣುತ್ತೀರಾ? ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ, ಸಮಾಜ ಸೇವೆ ಮಾಡುವ ಪತ್ರಕರ್ತರಾಗಲಿ ಎಂದು ಮನೋಭಾವನೆ ಮಕ್ಕಳಲ್ಲಿ ಬಿತ್ತಬೇಕು. ಗ್ರಾಮ, ನಗರಗಳಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅದಕ್ಕೆ ಸಾರ್ವಜನಿಕರು ಧ್ವನಿಯಾಗಿ ನಿಲ್ಲಬೇಕು. ಪತ್ರಿಕೆಗಳು ಉಳಿಯಲು ಪ್ರತಿಯೊಬ್ಬರು ಪತ್ರಿಕೆ ಕೊಂಡು ಓದಿ ಬೆಂಬಲಿಸಬೇಕು. ಬಾಗಲಕೋಟೆ ಜಿಲ್ಲೆ ಮಾಧ್ಯಮ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಈ ಕೃತಿಯು ಹುಬ್ಬಳ್ಳಿ- ಧಾರವಾಡ ಒಳಗೊಂಡು ಉತ್ತರ ಕರ್ನಟಕದ ಹೆಸರಾಂತ ಪತ್ರರ್ಕತರ ನೆನಪಿನ ಬುತ್ತಿಯಾಗಿದೆ. ನೋವುಂಡವರ, ಸರ್ಕಾರಕ್ಕೆ ನಿಮ್ಮ ನೋವು ತಿಳಿಸಿದವರ ಕತೆಯಾಗಿದೆ..
- ಮಲ್ಲಿಕಾರ್ಜುನ ಸಿದ್ದಣ್ಣವರ ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರು