ದಾಬಸ್ಪೇಟೆ: ಸಂಸ್ಕೃತಿ, ಸಂಸ್ಕಾರ, ಶಿಸ್ತು, ಸಂಯಮ ಕಲಿಸುವ ದೇವಾಲಯಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿ ಗ್ರಾಮಗಳಲ್ಲಿಯೂ ಇದ್ದು, ಪೂರ್ವಿಕರ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.
ಬೈರಸಂದ್ರ ದಾಖಲೆ ಜೋಗಿಪಾಳ್ಯದಲ್ಲಿ ಉದ್ಭವ ಕಾಡುಮಲ್ಲೇಶ್ವರ ದೇವಸ್ಥಾನ ಲೋಕಾರ್ಪಣೆ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೆ ಗ್ರಾಮೀಣ ಭಾಗ ಸಮೃದ್ಧಿಯಿಂದ ಕೂಡಿರುತ್ತದೆ. ನಮ್ಮ ಹಿರಿಯರ ಸಂಪ್ರದಾಯವನ್ನು ಪಾಲಿಸಬೇಕು. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆಯ ಜೊತೆಗೆ ಜೀವನದಲ್ಲಿ ಯಶಸ್ಸು ಲಭಿಸಿ ಮೋಕ್ಷ ಸಿಗಲಿದೆ. ಊರಿಗೆ ಉಪಕಾರಿಯಾಗಿ ಜೀವನದಲ್ಲಿ ಸಾರ್ಥಕತೆ ಕಾಣಬೇಕು ಎಂದು ಹೇಳಿದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕಾಡುಮಲ್ಲೇಶ್ವರ ಸ್ವಾಮಿಗೆ ಭವ್ಯ ದೇಗುಲವನ್ನು ನಿರ್ಮಿಸಿದ್ದು ರೈತರ ಆರಾಧ್ಯ ದೈವಾಗಿರುವ ಕಾರಣ ದೇವರ ದಯೆಯಿಂದ ಮಳೆ, ಬೆಳೆ ಚೆನ್ನಾಗಿ ಆಗಲಿ, ದೇವಸ್ಥಾನದ ರಸ್ತೆಯನ್ನು ಅಭಿವೃದ್ಧಿ ಮಾಡಲಿದ್ದು, ಸಮುದಾಯ ಭವನಕ್ಕೆ 50 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.
ಗುಡೇಮಾರನಹಳ್ಳಿಯ ಜಗಣ್ಣಯ್ಯನ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ದೇವರ ವಿಚಾರದಲ್ಲಿ ಯಾವುದೇ ರಾಜಕೀಯ ವೈಷಮ್ಯ, ಕಿಡಿಗೇಡಿತನ ಮಾಡಬಾರದು. ಕಾಡು ಮಲ್ಲೇಶ್ವರ ಬಹಳಷ್ಟು ಶಕ್ತಿ ದೇವರಾಗಿದೆ. ದೇವರ ಹಣವನ್ನು ದೇವರಿಗೆ ಅರ್ಪಣೆ ಮಾಡುವ ಕೆಲಸ ರಾಮಕೃಷ್ಣಪ್ಪ ಮಾಡುತ್ತಿರುವುದು ಸಂತೋಷದ ಸಂಗತಿ, ಕಾಡುಮಲ್ಲೇಶ್ವರ ದೇವಸ್ಥಾನ ಲೋಕಾರ್ಪಣೆಗೆ ಜೋಗಿಪಾಳ್ಯದ ಯುವಕರ ತಂಡ ಶ್ರಮಿಸಿರುವುದು ಸಂತೋಷ ಎಂದರು.ದೇವಾಲಯದ ನಿರ್ಮಾತೃ ಎಂಬಿಟಿ ರಾಮಕೃಷ್ಣಪ್ಪ ಮಾತನಾಡಿ, ನಮ್ಮ ತಂದೆತಾಯಿ ಸ್ಮರಣಾರ್ಥ ದೇವಸ್ಥಾನ ನಿರ್ಮಾಣದ ಮೂಲಕ ಸಾರ್ಥಕವಾಗಿದೆ. ಚೋಳರ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಮೂಲ ಉದ್ಭವ ಕಾಡುಮಲ್ಲೇಶ್ವರ ಸ್ವಾಮಿ ಲಿಂಗವನ್ನು ಹಾಗೂ ಬಸವಣ್ಣನ ಮೂರ್ತಿಯನ್ನು ಮರುಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಮಾಜಿ ಎಂಎಲ್ಸಿ ಬಿಎಂಎಲ್ ಕಾಂತರಾಜು, ಎನ್ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಟಿಎಪಿಎಂಎಸ್ ಅಧ್ಯಕ್ಷ ಹನುಮಂತರಾಜು, ಲಗ್ಗೆರೆ ಬಿಬಿಎಂಪಿ ಮುಖಂಡರಾದ ನಾರಾಯಣಸ್ವಾಮಿ, ಹುಚ್ಚಹನುಮೇಗೌಡ, ತಿಮ್ಮೆಗೌಡ, ವೀರಮಾರೇಗೌಡ, ಮಧುಕರ್, ಗಂಗಾಧರ್, ಶಿವಶಂಕರ್, ಆಗಮಿಕರಾದ ನವೀನ್ಕುಮಾರ್ ಶಾಸ್ತ್ರಿ, ಆರ್ಚಕ ಮೊದಲಕೋಟೆ ಮಂಜುನಾಥ್, ಜೋಗಿಪಾಳ್ಯ ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.
ಪೆÇೀಟೋ 1 : ಬೈರಸಂದ್ರ ದಾಖಲೆ ಜೋಗಿಪಾಳ್ಯ ಗ್ರಾಮದಲ್ಲಿ ಉದ್ಭವ ಕಾಡುಮಲ್ಲೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಸಮಾರಂಭವನ್ನು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಪೆÇೀಟೋ 2 :ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.