ಸಾರಾಂಶ
ಮಾಗಡಿ: ತುಮಕೂರಿನಲ್ಲಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸುವ ಹೋರಾಟದ ಹಿನ್ನೆಲೆಯಲ್ಲಿ ಮಾಗಡಿಯಲ್ಲೂ ಕೂಡ ಹೋರಾಟದ ಕಾವು ಹೆಚ್ಚಾಗಿದ್ದು ತುಮಕೂರಿನ ಹಾಲು, ತರಕಾರಿ ಮಾಗಡಿಯಲ್ಲಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಶಾಸಕ ಬಾಲಕೃಷ್ಣ ತುಮಕೂರು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಹೊಂಬಾಳಮ್ಮನಪೇಟೆ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡ ಎಕ್ಸ್ಪ್ರೆಸ್ ಕೆನಾಲ್ ವಿಚಾರವಾಗಿ ನಾಳೆಯಿಂದ ಹೋರಾಟ ಮಾಡುತ್ತೇವೆ. ತುಮಕೂರಿನಿಂದ ಕುದೂರಿಗೆ ಹಾಲು ಮಾರಾಟ ಮಾಡುತ್ತಿದ್ದು ಇದನ್ನು ನಿಲ್ಲಿಸುತ್ತೇವೆ. ತುಮಕೂರಿನಲ್ಲಿ ಬೆಳೆಯುವ ತರಕಾರಿ ಬೆಂಗಳೂರಿನಲ್ಲಿ ಮಾರಾಟವಾಗುತ್ತಿದ್ದು ಇದನ್ನು ತಡೆಯುತ್ತೇವೆ. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡರು ತೊಡೆತಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ. ನಾವು ಕೂಡ ಬೆಂಗಳೂರಿಗೆ ಅವರು ಬರಲಿ ಅವರ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ತಿಳಿಸುತ್ತೇವೆ ಎಂದು ಹೇಳಿದರು.ಪರಸ್ಪರ ಸೌಹಾರ್ದಯುತವಾಗಿ ನೀರು ಹಂಚಿಕೊಳ್ಳೋಣ ಎಂದು ನಾವು ತಾಳ್ಮೆಯಾಗಿ ಇದ್ದೆವು. ಹೇಮಾವತಿ ನೀರು ಒಬ್ಬರಿಗೆ ಸೀಮಿತವಾಗಿಲ್ಲ. ನೀವು ಕೂಡ ಕೃಷ್ಣ ಕೊಳ್ಳದವರೆಗೂ ಹೇಮಾವತಿಯನ್ನು ತೆಗೆದುಕೊಂಡು ಹೋಗಲಾಗಿದೆ. ನಮ್ಮ ಪಾಲಿನ ನೀರನ್ನು ನಾವು ಕೇಳುತ್ತಿದ್ದೇವೆ. ನಿಮ್ಮಲ್ಲೇ ವಾಲ್ ಗಳನ್ನು ಇಟ್ಟುಕೊಂಡು ನಮ್ಮ ವಿರುದ್ಧ ಈಗ ಹೇಮಾವತಿ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವುದು ಸರಿಯಲ್ಲ. ನಾಳೆಯಿಂದಲೇ ನಮ್ಮ ಹೋರಾಟ ಮಾಡಲಿದ್ದೇವೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಕುಮಾರ್ ಹಾಗೂ ತುರುವೇಕೆರೆ ಕೃಷ್ಣಪ್ಪ ವಿರುದ್ಧ ಬಾಲಕೃಷ್ಣ ಕಿಡಿಕಾರಿದರು.ಹೇಮಾವತಿ ನೀರು ಬಿಟ್ಟರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಶಾಸಕ ಸುರೇಶ್ ಗೌಡ ಹೇಳಿಕೆಗೆ ಬಾಲಕೃಷ್ಣ ಪ್ರತಿಕ್ರಿಯಿಸಿ, ಈ ಕೆಲಸವನ್ನು ಮೊದಲೇ ಮಾಡಲಿ ಆಗ ಎಲ್ಲರಿಗೂ ನೆಮ್ಮದಿ ಸಿಗುತ್ತೆ ಒಂದು ಕಡೆ ಬಂದಾಗ ಬೇರೆ ಮಾತನಾಡುತ್ತಾರೆ, ಜನಗಳು ಇದ್ದಾಗ ಬೇರೆ ಮಾತನಾಡುತ್ತಾರೆ. ಹೇಮಾವತಿ ವಿಚಾರವಾಗಿ ನಮ್ಮ ಪಾಲಿನ ನೀರನ್ನು ಮಾತ್ರ ಕೇಳುತ್ತಿದ್ದೇವೆ. ಅವರು ಬೆಂಗಳೂರಿಗೆ ಬರಲಿ ನಮಗೂ ಗೊತ್ತು ಏನು ಮಾಡಬೇಕು ಎಂದು ಶಾಸಕ ಸುರೇಶ್ ಗೌಡ ವಿರುದ್ಧ ಬಾಲಕೃಷ್ಣ ಎಚ್ಚರಿಕೆ ನೀಡಿದರು.
ರೈತ ಸಂಘ ಗುಬ್ಬಿಗೆ ಭೇಟಿ: ತಾಲೂಕಿನ ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಗುಬ್ಬಿಗೆ ಸೋಮವಾರ ಹಲವು ರೈತರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲಿದ್ದು ಮಾಗಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿರುವ ಶಾಸಕ ಸುರೇಶ್ ಗೌಡರ ವಿರುದ್ಧ ರೈತ ಸಂಘ ಎಚ್ಚರಿಕೆ ನೀಡಿ, ಕುಡಿವ ನೀರು ಬಿಡಲ್ಲವೆಂದು ತಡೆಯಲು ಯಾರಿಂದಲೂ ಆಗೋದಿಲ್ಲ. ನಾವು ಕೂಡ ರೈತರಾಗಿದ್ದು ನಮ್ಮ ಪಾಲಿನ ನೀರನ್ನು ಕೊಡಲು ಆಗುವುದಿಲ್ಲ ಎಂದು ಒಬ್ಬ ಜನಪ್ರತಿನಿಧಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ನಮಗೂ ತಾಕತ್ತಿದೆ ಸೋಮವಾರ ಗುಬ್ಬಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ರೈತ ಸಂಘದ ಸಭೆ ಕರೆದು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋಡೆ ಕಟ್ಟಿ ತುಮಕೂರಿನ ಜನಕ್ಕೆ ಎಚ್ಚರಿಕೆ ಕೊಡಲಿದ್ದೇವೆ. ಹೇಮಾವತಿ ತುಮಕೂರಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಕೂಡ ಕಾವೇರಿ ಕೊಳ್ಳದವರಾಗಿದ್ದು ನಮಗೂ ಕೂಡ ಹೇಮಾವತಿ ನೀರಿನ ಮೇಲೆ ಹಕ್ಕಿದೆ. ನಾವು ಕೂಡ ತೆರಿಗೆ ಕಟ್ಟಿದ್ದು ತೆರಿಗೆ ಹಣದಲ್ಲಿ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ನಡೆಯುತ್ತಿದೆ. ಮಾಗಡಿ ಜನತೆಯನ್ನು ಕೆಣಕಬೇಡಿ ಎಂದು ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಎಚ್ಚರಿಕೆ ನೀಡಿದರು.ಈ ವೇಳೆ ಮುಖಂಡರಾದ ಬಗಿನಗೆರೆ ರಂಗಸ್ವಾಮಿ, ಧನಂಜಯ್ಯ, ಕುಮಾರ್, ಚಿಕ್ಕಕಲ್ಯ ಶ್ರೀಧರ್, ಮಂಜು, ತಾಳೆಕೆರೆ ಬೆಟ್ಟೇಗೌಡ, ಕೇಶವ, ಗಣೇಶ್, ಕೃಷ್ಣಪ್ ಐಯ್ಯಂಡಹಳ್ಳಿ ಮಂಜು, ಮಂಚನಹಳ್ಳಿ ಹನುಮಯ್ಯ, ಸಿದ್ದಾಪುರ, ಶಿವಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
(ಫೋಟೊ ಕ್ಯಾಫ್ಷನ್)ಮಾಗಡಿಯ ಹೊಂಬಾಳಮ್ಮನಪೇಟೆ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.