ಸಾರಾಂಶ
ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿ ಕರೆ ನೀಡಿದ್ದ ಮುಷ್ಕರ ಯಾವುದೇ ಪರಿಣಾಮ ಬೀರಿಲ್ಲ. ಖಾಸಗಿ ವೈದ್ಯಕೀಯ ಸೇವೆ ಎಂದಿನಂತೆ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕೋಲ್ಕೊತ್ತಾದ ಆರ್ಜಿಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಹಾಗೂ ಆಸ್ಪತ್ರೆ ಮೇಲೆ ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿ ಕರೆ ನೀಡಿದ್ದ ಮುಷ್ಕರದಿಂದ ಯಾವುದೇ ಪರಿಣಾಮ ಬೀರಲಿಲ್ಲ.ಭಾರತೀಯ ವೈದ್ಯಕೀಯ ಸಂಘ ಒಂದು ದಿನ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟಿಸುವ ಘೋಷಣೆ ಮಾಡಿದ್ದ ಹಿನ್ನೆಲೆ ವೈದ್ಯಕೀಯ ವ್ಯವಸ್ಥೆ ಅಸ್ತವ್ಯಸ್ತವಾಗುವುದಾಗಿ ತಿಳಿಸಲಾಗಿತ್ತು. ಆದರೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದ ವೈದ್ಯರು ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ, ಅಗತ್ಯ ಸೇವೆ ನೀಡಿದರು. ಇದರೊಂದಿಗೆ ಖಾಸಗಿ ವೈದ್ಯಕೀಯ ಸೇವೆಯೂ ಎಂದಿನಂತೆ ನಡೆಯಿತು.
ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಶಿವಪ್ರಸಾದ್ ಮಾತನಾಡಿ, ರೋಗಿಗಳಿಗೆ ತುರ್ತು ಚಿಕಿತ್ಸೆ ಆದೇಶ ನೀಡಲಾಗಿತ್ತು. ಆದರೆ, ಇಲ್ಲಿ ಬಂದ ರೋಗಿಗಳನ್ನು ಹಿಂದಕ್ಕೆ ಕಳುಹಿಸಲು ಸಾಧ್ಯವಾಗದಿದ್ದರಿಂದ, ಎಲ್ಲರಿಗೂ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.