ಮೂರು ದಿನಗಳ ಕಾಲ ನಡೆದ ಪಶ್ಚಿಮ ವಲಯದ 8ನೇ ಪೊಲೀಸ್ ಕರ್ತವ್ಯ ಕೂಟವು ಮಣಿಪಾಲ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಪಶ್ಚಿಮ ವಲಯದ ಪೊಲೀಸ್ ಉಪಮಹಾನಿರೀಕ್ಷಕ ಚೇತನ್ ಆರ್. ಅವರು ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಮೂರು ದಿನಗಳ ಕಾಲ ನಡೆದ ಪಶ್ಚಿಮ ವಲಯದ 8ನೇ ಪೊಲೀಸ್ ಕರ್ತವ್ಯ ಕೂಟವು ಮಣಿಪಾಲ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಪಶ್ಚಿಮ ವಲಯದ ಪೊಲೀಸ್ ಉಪಮಹಾನಿರೀಕ್ಷಕ ಚೇತನ್ ಆರ್. ಅವರು ವಹಿಸಿದ್ದರು.ಅವರು ಕೂಟದ ವಿಜೇತರಿಗೆ ಅಭಿನಂದಿಸಿ, ಪೊಲೀಸರು ತಮ್ಮ ದೈನಂದಿನ ಕರ್ತವ್ಯದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ತನಿಖೆಯನ್ನು ನಡೆಸಿ, ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು ಎಂದು ಕರೆ ನೀಡಿದರು. ವಿಶೇಷ ಆಹ್ವಾನಿತರಾಗಿ ಮಾಹೆಯ ಸಹಕುಲಾಧಿಪತಿ ಡಾ. ಹೆಚ್.ಎಸ್. ಬಲ್ಲಾಳ್, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಉಪನಿರ್ದೇಶಕಿ ಸುಜಾತ ಕೆ.ಎಂ., ಮಾಹೆಯ ಪ್ರಮುಖರಾದ ಡಾ. ಅನಿಲ್ ಭಟ್, ಡಾ. ವಿನೋದ್ ಸಿ. ನಾಯಕ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಭಾಗವಹಿಸಿದ್ದರು.ಈ ಕರ್ತವ್ಯ ಕೂಟದ ಸೈಂಟಿಫಿಕ್ ಏಡ್ಸ್ ಟು ಇನ್ವೆಸ್ಟಿಗೇಷನ್ನ 8 ವಿಭಾಗ, ಗಣಕಯಂತ್ರ ನೈಪುಣ್ಯತೆಯ 3 ವಿಭಾಗ, ಪೋಟೋಗ್ರಫಿ, ವೀಡಿಯೋಗ್ರಫಿ, ವಿದ್ವಂಸಕ ಕೃತ್ಯ ತಪಾಸಣೆಯ 4 ವಿಭಾಗ, ಪೊಲೀಸ್ ಶ್ವಾನ ದಳದ 3 ವಿಭಾಗ ಸೇರಿ ಒಟ್ಟು 20 ವಿಭಾಗಗಳಲ್ಲಿ ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಉಡುಪಿ ಜಿಲ್ಲೆಯು ಅತೀ ಹೆಚ್ಚು ಪದಕಗಳನ್ನು ಪಡೆದು ಸರ್ವಾಂಗೀಣ ತಂಡ ಪ್ರಶಸ್ತಿಯನ್ನು ಪಡಕೊಂಡಿತು. ಅತ್ಯುತ್ತಮ ಶ್ವಾನ ಪ್ರಶಸ್ತಿಯನ್ನು ಉಡುಪಿಯ ಪೊಲೀಸ್ ಶ್ವಾನ ಸ್ನೈಪರ್ ಪಡೆದುಕೊಂಡಿದ್ದು, ಇದರ ಹ್ಯಾಂಡ್ಲರ್ ಹರೀಶ್ ಶೆಟ್ಟಿ ಪ್ರಶಸ್ತಿ ಪಡಕೊಂಡರು.ಪೊಲೀಸ್ ನಿರೀಕ್ಷಕ ಸೋಮಶಂಕರ್ ಎನ್. ಸ್ವಾಗತಿಸಿ, ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂದಿಸಿದರು. ಕಳೆದ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕಗಳಿಸಿದ ಉಡುಪಿ ಡಿ.ಎ.ಆರ್. ಸಿಬ್ಬಂದಿ ಲೋಕೇಶ್ ಮತ್ತು ಕರ್ತವ್ಯಕೂಟದ ಅಚ್ಚುಕಟ್ಟು ನಿರ್ವಹಣೆಗಾಗಿ ನೋಡಲ್ ಅಧಿಕಾರಿ ಗೌರೀಶ್ ಎ.ಸಿ. ಅವರನ್ನು ಸನ್ಮಾನಿಸಲಾಯಿತು.