ಪ್ರಿಯಾಂಕಾಗೂ ವಯನಾಡಿಗೂ ಏನು ಸಂಬಂಧ?

| Published : Oct 30 2024, 12:42 AM IST

ಸಾರಾಂಶ

ಚನ್ನಪಟ್ಟಣ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆದುಕೊಂಡು ಬಂದು ಈಗ ವಯನಾಡು ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವರಿಗೂ ವಯನಾಡಿಗೆ ಏನು ಸಂಬಂಧ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಚನ್ನಪಟ್ಟಣ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆದುಕೊಂಡು ಬಂದು ಈಗ ವಯನಾಡು ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವರಿಗೂ ವಯನಾಡಿಗೆ ಏನು ಸಂಬಂಧ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಚನ್ನಪಟ್ಟಣ ಕ್ಷೇತ್ರದ ಸಿದ್ದಯ್ಯಗೌಡ ದೊಡ್ಡಿ ಗ್ರಾಮದಲ್ಲಿ ಸುದ್ದಿಗಾರರು ವಲಸೆಗಾರರಿಗೆ ಬಿಟ್ಟು ಕೆಲಸಗಾರರಿಗೆ ವೋಟ್ ಕೊಡಿ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೆಹಲಿಯಲ್ಲಿ ಜನಿಸಿರುವ ಇಟಲಿ ತಾಯಿಯ ಮಗಳು ವೈನಾಡಿನಲ್ಲಿ ನಿಲ್ಲಿಸಬಹುದು. ನಾನು ಕನ್ನಡಿಗ, ನಾನು ವಲಸಿಗ ಹೇಗಾಗುತ್ತೇನೆ ಎಂದು ಹೇಳಿದರು.

ರಾಮನಗರ ನನ್ನ ಕರ್ಮಭೂಮಿ, ನನಗೆ ರಾಜಕೀಯ ಜನ್ಮ ಕೊಟ್ಟ ಪುಣ್ಯಭೂಮಿ. ನಾನು ಮಣ್ಣಾಗುವುದೇ ರಾಮನಗರದ ಕೇತಿಗಾನಹಳ್ಳಿಯ ಮಣ್ಣಿನಲ್ಲಿ. ನಾನು ಹುಟ್ಟಿದ್ದು ಹಾಸನದಲ್ಲಿ, ನನ್ನ ಸಂಪೂರ್ಣ ಬದುಕು ರಾಮನಗರ ಜಿಲ್ಲೆಯಲ್ಲಿ ಎಂದು ತಿಳಿಸಿದರು.

ಭೈರತಿ ಸುರೇಶ್‌ಗೆ ಎಚ್ಡಿಕೆ ತಿರುಗೇಟು:

ಚನ್ನಪಟ್ಟಣ ಉಪ ಚುನಾವಣೆಗೆ ಕುಮಾರಸ್ವಾಮಿ ಹಣ ತಂದು ಸುರಿಯುತ್ತಿದ್ದಾರೆ ಎಂದು ಆರೋಪ ಮಾಡಿರುವ ಸಚಿವ ಭೈರತಿ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ವಾಲ್ಮೀಕಿ ನಿಗಮದಲ್ಲಿದ್ದ ಪರಿಶಿಷ್ಟರ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಉಕ್ಕು ಮಂತ್ರಿಯಾಗಿ ಪುತ್ರನ ಎಲೆಕ್ಷನ್ ಗೆ ಕುಮಾರಸ್ವಾಮಿ ಅವರು ಹಣ ಸುರಿಯುತ್ತಾರೆ ಎಂದು ಅವರು ಹೇಳಿದ್ದಾರೆ, ಅಲ್ಲವೇ? ಸುರೇಶ್ ಅವರಿಗೆ ನಾನು ಹೇಳಲು ಬಯಸುತ್ತೇನೆ, ಉಕ್ಕು ಮಂತ್ರಿಯಾಗಿ ನಾನು ದುಡ್ಡು ಪ್ರಿಂಟ್ ಮಾಡ್ತಿನಾ? ಎಂದು ಕೇಳಿದರು.

ಕಳೆದ ಲೋಕಸಭೆ ಚುನಾವಣೆ ವೇಳೆ ವಾಲ್ಮೀಕಿ ನಿಗಮದಲ್ಲಿ 82 ಕೋಟಿ ಲೂಟಿ ಮಾಡಿದ್ದಾರೆ‌. ಅದೇ ಹಣದಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನುವುದು ಕೂಡ ಗೊತ್ತಿದೆ. ಯಾವ ನೈತಿಕತೆ ಇಟ್ಟುಕೊಂಡು ಹಣದ ಬಗ್ಗೆ ಮಾತನಾಡುತ್ತಾರೆ‌. ಅಪಪ್ರಚಾರ ಮಾಡೋದು ಕಾಂಗ್ರೆಸ್‌ನವರ ಚಾಳಿ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಚನ್ನಪಟ್ಟಣದಲ್ಲಿ ಮತದಾರರು ಜೆಡಿಎಸ್ ಬಗ್ಗೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಕಾಂಗ್ರೆಸ್ ನಾಯಕರು ಏನೇ ಕುತಂತ್ರ ಮಾಡಿದರೂ ಮತದಾರರು ಎನ್‌ಡಿ‌ಎ ಕೂಟಕ್ಕೆ ಮತ ಹಾಕುತ್ತಾರೆ‌‌ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಾಕ್ಸ್‌..............

ಮನೆಮನೆಗೂ ತರಳಿ ಮತ ಯಾಚಿಸಿದ ಎಚ್ಡಿಕೆ

-ಕೆಂದ್ರ ಸಚಿವ ಕುಮಾರಸ್ವಾಮಿ ಅವರಿ ಗ್ರಾಮಗಳ ಪರ್ಯಟನೆ, ರೈತರ ಭೇಟಿ

ಚನ್ನಪಟ್ಟಣ: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಂಗಳವಾರ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.

ಬೆಂಗಳೂರಿನಿಂದ ಮಧ್ಯಾಹ್ನ ಚನ್ನಪಟ್ಟಣ ಕ್ಷೇತ್ರಕ್ಕೆ ಆಗಮಿಸಿದ ಕುಮಾರಸ್ವಾಮಿ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿದರು.

ಕೇವಲ ಹತ್ತರಿಂದ ಹನ್ನೆರಡು ಮನೆಗಳಿರುವ ಸಿದ್ದೇಗೌಡನ ದೊಡ್ಡಿ ಗ್ರಾಮದಲ್ಲಿ ಪ್ರತಿ ಮನೆಗೂ ಭೇಟಿ ನೀಡಿದ ಸಚಿವರು ಮಹಿಳೆಯರು, ಯುವಜನರು, ಹಿರಿಯರಿಂದ ಮತಯಾಚನೆ ಮಾಡಿದರು. ಸಿದ್ದೇಗೌಡನ ದೊಡ್ಡಿ ನಂತರ ಕನ್ನಿದೊಡ್ಡಿ, ಅಮ್ಮಹಳ್ಳಿ ದೊಡ್ಡಿ, ಬಿವಿ ಹಳ್ಳಿ, ಅರಳಾಳುಸಂದ್ರ, ಚೆನ್ನಿಗನ ಹೊಸಹಳ್ಳಿ, ಬಿವಿ ಪಾಳ್ಯ, ದ್ಯಾವಪಟ್ಟಣ, ಗೊಲ್ಲರದೊಡ್ಡಿ, ವಿಠ್ಠಲೇನಹಳ್ಳಿ, ಮೆಣಸಿಗನಹಳ್ಳಿ, ಲಂಬಾಣಿ ತಾಂಡ್ಯ ಸೇರಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿಯೂ ಮನೆಮನೆಗೆ ತೆರಳಿ ನಿಖಿಲ್‌ನನ್ನು ಆಶೀರ್ವಾದ ಮಾಡುವಂತೆ ಕೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.

29ಕೆಆರ್ ಎಂಎನ್ 6.ಜೆಪಿಜಿ

ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಕನ್ನಿದೊಡ್ಡಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮನೆಮನೆಗೆ ತೆರಳಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚನೆ ಮಾಡಿದರು.