ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಆಲಮಟ್ಟಿ ಅಣೆಕಟ್ಟು ಎತ್ತರಿಸುವುದಾದರೆ ಯಾವುದೇ ತ್ಯಾಗಕ್ಕೂ ಸಿದ್ದ. ಅಣೆಕಟ್ಟು ನಿರ್ಮಾಣದಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಜನರ ತ್ಯಾಗವಿದೆ. ತ್ಯಾಗ ಮಾಡಿದವರಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ರೈತರಿಗೆ, ನೀರಾವರಿಗೆ, ಕುಡಿಯುವ ನೀರಿಗೆ ಅನುಕೂಲವಾಗಲು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸಬೇಕು. ಇದಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದವರು ಆಣೆಕಟ್ಟು ಎತ್ತರವನ್ನು 524 ಮೀ.ಗೆ ಏರಿಸಲು ಕ್ಯಾತೆ ತೆಗೆಯುತ್ತಿದ್ದು, ಈ ಕುರಿತು ವಿಜಯಪುರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಲಾಗುವದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲಾಗುವದು. ಟೈಮ್ ಬಾಂಡ ಮೂಲಕ ಹಣ ಸಂಗ್ರಹಿಸಿ, ಇಲ್ಲವೆ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಆಣೆಮಟ್ಟನ್ನು 524 ಮೀಗೆ ಎತ್ತರಿಸಬೇಕು. ಮತ್ತು 734 ಟಿಎಂಸಿ ನೀರನ್ನು ಬಳಸಿಕೊಳ್ಳಬೇಕಾಗಿದೆ ಎಂದರು.ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ ಏತ ನೀರಾವರಿ, ಇಂಡಿ ಬ್ರ್ಯಾಂಚ್ ಕಾಲುವೆ ಮತ್ತು ರೇವಣಸಿದ್ದೇಶ್ವರ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಆಲಮಟ್ಟಿ ಆಣೆಕಟ್ಟೆಯ ಎತ್ತರ 524 ಮೀ. ಆಗಬೇಕು. ಆಲಮಟ್ಟಿ ಆಣೆಕಟ್ಟು ನೀರು ಸಂಗ್ರಹಕ್ಕೂ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಕ್ಕೂ ಸಂಬಂಧವಿಲ್ಲ ಎನ್ನುವದಕ್ಕೆ ವೈಜ್ಞಾನಿಕ ವರದಿ ಸಲ್ಲಿಕೆಯಾಗಿದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬಂದಿದ್ದು ಕಳವಳಕಾರಿ ಸಂಗತಿ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಂತನೆ ಮಾಡಿ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಬೀಜ ಮತ್ತು ಗೊಬ್ಬರ ರೈತರಿಗೆ ಸರಿಯಾಗಿ ವಿತರಣೆಯಾಗಬೇಕು ಎಂದು ಸೂಚನೆ ನೀಡಿದರು.ಹೆಸ್ಕಾಂ ಎಇಇ ಎಸ್.ಆರ್.ಮೆಂಡೆದಾರ ಮಾತನಾಡಿ, ತಾಲೂಕಿನಲ್ಲಿ 15 ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮತ್ತೆ 4 ವಿದ್ಯುತ್ ಕೇಂದ್ರಕ್ಕೆ ಹೊಸ ಪ್ರಸ್ತಾವನೆ ಕಳುಹಿಸಿದ್ದು ಮಂಜುರಾತಿ ದೊರೆತಿದೆ ಎಂದರು.ಇಂಡಿಯಲ್ಲಿ ತಾಯಿ-ಮಗು ಆಸ್ಪತ್ರೆ ಪ್ರಾರಂಭಿಸುವುದು, ಕುಡಿಯುವ ನೀರಿನ ಪ್ರದೇಶಗಳಿಗೆ ನೀರು ಪೂರೈಸುವ ಕುರಿತು ಚರ್ಚಿಸಲಾಯಿತು. ಹಕ್ಕುಪತ್ರ ವಿತರಣೆಯಲ್ಲಿ ಕರ್ನಾಟಕದಲ್ಲಿ ರಾಜ್ಯಕ್ಕೆ ಇಂಡಿ ತಾಲೂಕು ಎರಡನೇ ಸ್ಥಾನದಲ್ಲಿದೆ ಎಂದ ಅವರು, ಇಂಡಿಯಲ್ಲಿ ಇನ್ನೊಂದು ಬಸ್ ನಿಲ್ದಾಣ ನಿರ್ಮಿಸುವುದು ಹಾಗೂ ತಾಲೂಕಿನಲ್ಲಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಹಣ ನೀಡುವದಾಗಿ ತಿಳಿಸಿದರು.
ಕೃಷಿ ಇಲಾಖೆಯ ಚಂದ್ರಕಾಂತ ಪವಾರ, ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹೆಸ್ಕಾಂ ಇಇ ಎಸ್.ಎಸ್. ಬಿರಾದಾರ, ತಾಪಂ ಎಡಿ ಸಂಜಯ ಖಡಗೇಕರ ಮಾಹಿತಿ ನೀಡಿದರು. ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ತಾಪಂ ಇಒ ನಂದೀಪ ರಾಠೋಡ, ಡಿ.ಎಸ್.ಪಿ ಜಗದೀಶ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಬಿ.ಕೆ.ಪಾಟೀಲ, ಗುರನಗೌಡ ಪಾಟೀಲ, ದೀಪಾಲಿ ಕುಲಕರ್ಣಿ, ಜೆ.ಎಂ.ಕರಜಗಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ ಮತ್ತಿತರಿದ್ದರು.