ಕನ್ನಡಪ್ರಭ ವಾರ್ತೆ ಸಾಗರ
ವೀರಶೈವ ಸಮಾಜವು ಶಿಕ್ಷಣ, ದಾಸೋಹದ ಜೊತೆಗೆ ಸಾಮಾಜಿಕ ಕಾರ್ಯಗಳು ಸಂಪನ್ನಗೊಳ್ಳುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ಎಂದು ಆನಂದಪುರಂ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಮಂಗಳವಾರ ವೀರಶೈವ ಸಮಾಜದ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಾಗರ ಪಟ್ಟಣದಲ್ಲಿ ವೀರಶೈವ ಸಮಾಜ ನೆನಪಿನಲ್ಲಿ ಉಳಿಯುವಂತಹ ಅನೇಕ ಕೆಲಸಗಳನ್ನು ಮಾಡಿದೆ. ಸಮಾಜ ಬಾಂಧವರು ಸಂಘಟಿತವಾಗಿದ್ದಾಗ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಹುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಊರಿನ ಅಭಿವೃದ್ಧಿಗೆ ತನ್ನದೆ ಕೊಡುಗೆ ನೀಡಿದೆ. ಇಂತಹ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುವುದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಸಮಾಜದ ಕಲ್ಯಾಣ ಮಂಟಪಕ್ಕೆ ಬೇಕಾದ ಆರ್ಥಿಕ ಸಹಕಾರ ನೀಡಲಾಗುತ್ತದೆ. ಜೊತೆಗೆ ಮಾರ್ಕೆಟ್ ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವೀರೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಅನುದಾನ ಬಯಸಿ ಸಮಿತಿಯವರು ಮನವಿ ಸಲ್ಲಿಸಿದರೆ ತಕ್ಷಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ವೀರಶೈವ ಸಮಾಜ ಊರಿನ ಮಧ್ಯಭಾಗದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ನಿರ್ಮಿಸಿರುವುದು ಊರನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವಕಾಶ ಕಲ್ಪಿಸಿದಂತೆ ಆಗಿದೆ. ಮಠಮಂದಿರಗಳಿಗೆ ಆರ್ಥಿಕ ಸಹಕಾರ ನೀಡುವ ಕಾರ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗಿನಿಂದ ಆರಂಭಗೊಂಡಿತು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕೆಂಜಿಗಾಪುರ ದೇವಸ್ಥಾನದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ೨.೫೦ ಕೋಟಿ ರು., ರಿಪ್ಪನ್ಪೇಟೆಯ ಶಿವಮಂದಿರ ನಿರ್ಮಾಣಕ್ಕೆ ೩.೫೦ ಕೋಟಿ ರು. ಸೇರಿದಂತೆ ಒಂದಷ್ಟು ಅನುದಾನ ಕಲ್ಪಿಸಲು ಯಶಸ್ವಿಯಾಗಿದ್ದೇನೆ. ಇಂತಹ ಸಮಾಜಗಳ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಜಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜನ ಹಕ್ರೆ, ಪ್ರಮುಖರಾದ ಕೆ.ಎಚ್.ಜ್ಞಾನೇಶ್ವರಪ್ಪ, ದಿನೇಶ್ ಬರದವಳ್ಳಿ, ಅನಿಲ್ ಗೌಡ, ನಿರಂಜನ ಕೋರಿ, ಕವಿತಾ ಜಯಣ್ಣ, ಎಸ್.ಬಿ.ಮಹಾದೇವ್ ಇನ್ನಿತರರು ಉಪಸ್ಥಿತರಿದ್ದರು. ಬಿ.ಸಿ.ಶಶಿಧರ್ ಸ್ವಾಗತಿಸಿ, ಬಿ.ಎಸ್.ಗಿರೀಶ್ ನಿರೂಪಿಸಿದರು.