ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಶಾಲನಗರ ತಾಲೂಕಿನ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಸುಕಿನ ಜೋಳಕ್ಕೆ ಬೂಜು ತುಪ್ಪಳ ಅಥವಾ ಬಿಳಿ ಸುಳಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಉಂಟುಮಾಡಿದೆ.ಈ ನಿಟ್ಟಿನಲ್ಲಿ ಗೋಣಿಕೊಪ್ಪಲು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಕೆ. ವಿ., ಕುಶಾಲನಗರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಮತ್ತು ಮಡಿಕೇರಿ ಸಹಾಯಕ ಕೃಷಿ ನಿರ್ದೇಶಕ ದೋರೈ ರಾಜು ಅವರುಗಳನ್ನೊಳಗೊಂಡ ತಂಡ ರೋಗ ಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.
ರೋಗದ ಲಕ್ಷಣಗಳು: ಸಾಮಾನ್ಯವಾಗಿ ಈ ರೋಗವು Peronosclerospora ಎಂಬ ಶಿಲಿಂಧ್ರದಿಂದ ಬರುತ್ತದೆ. ರೋಗ ತಗುಲಿದ ಬೆಳೆಯಲ್ಲಿ ಬೂದು ಬಣ್ಣದ ಶಿಲೀಂಧ್ರವು ಎಲೆಗಳ ತಳ ಮತ್ತು ಮೆಲ್ಭಾಗದಲ್ಲಿ ಕಂಡು ಬರುತ್ತದೆ. ಎಲೆಗಳ ಮೇಲೆ ಬಿಳಿ ಮತ್ತು ಹಳದಿ ಉದ್ದನೆಯ ಪಟ್ಟಿಗಳು ಕಾಣಿಸಿಕೊಂಡು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರ ಎಲೆಗಳು ಒಣಗುವುದು, ಬಿಳಿಯಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗಿ ಎಲೆಗಳು ಒಣಗಿ ಹಾಳಾಗುತ್ತವೆ. ರೋಗಕ್ಕೆ ಕಾರಣ: ವಾತಾವರಣದಲ್ಲಿ ಹೆಚ್ಚು ತೇವಾಂಶ, ತುಂತುರು ಮಳೆ ಹನಿ, ಮೋಡಕವಿದ ವಾತಾವರಣ, ಮಂಜು ಹನಿಯಿಂದ ಎಲೆಗಳು ದೀರ್ಘ ಸಮಯ ಒದ್ದೆಯಾಗಿರುವುದು, ಮಿತವಾದ ತಾಪಮಾನ ಮತ್ತು ಹೆಚ್ಚು ಆರ್ದ್ರತೆ, ಹಿಂದಿನ ಬೆಳೆಗಳಲ್ಲಿ ಉಳಿದುಕೊಂಡಿದ್ದ ಶಿಲೀಂಧ್ರವು ಹರಡುವ ಸಾಧ್ಯತೆ ಇರುತ್ತದೆ.ಹತೋಟಿ ಕ್ರಮಗಳು: ರೋಗ ತಗುಲಿದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಸಮತೋಲನ ಗೊಬ್ಬರವನ್ನು ಬಳಕೆ ಮಾಡಬೇಕು. ಆದರೆ ಅತಿಯಾದ ಸಾರಜನಕದ ಗೊಬ್ಬರ ನೀಡಬಾರದು. ರೋಗದ ಹತೋಟಿಗೆ 2.0 ಗ್ರಾಂ ಮೆಟಲಾಕ್ಸೆಲ್ ಹಾಗೂ ಮ್ಯಾಂಕೋಜೆಬ್ ಅಥವಾ 2.0 ಮಿ. ಲಿ. ಮೆಟಲಾಕ್ಸೆಲ್ ಹಾಗೂ ಕ್ಲೋರೋಥಲನಿಲ್ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಸಂರ್ಪಕಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.