ಸಾರಾಂಶ
ಮಂಗಳೂರು : ಅಡಕೆಯು ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್ ಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ)ಯ ಏಕಪಕ್ಷೀಯ ನಿರ್ಣಯಕ್ಕೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪುರಾತನ ಕಾಲದಿಂದಲೂ ಅಡಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಸಂಸ್ಕೃತಿ ಪ್ರತೀಕ. ಆಯುರ್ವೇದ ಶಾಸ್ತ್ರದಲ್ಲಿಯೂ ಅಡಕೆಗೆ ಅದರ ಔಷಧೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ. ಕಫ ಮತ್ತು ಪಿತ್ಥದ ಸಮಸ್ಯೆ ಶಮನಗೊಳಿಸುವ ಮತ್ತು ಜೀರ್ಣಕ್ರೀಯೆಯನ್ನು ಉದ್ದೀಪನಗೊಳಿಸುವ ಗುಣವನ್ನು ಅಡಕೆ ಹೊಂದಿದೆ. ಇದರ ಆಯುರ್ವೇದದ ಸತ್ವದಿಂದಾಗಿ ವಿಳ್ಯದೆಲೆಯೊಂದಿಗೆ ಅಡಕೆ ಬಳಸಿ ತಾಂಬೂಲ ತಿನ್ನುವುದು ಸತ್- ಸಂಪ್ರದಾಯ ಮತ್ತು ಆರೋಗ್ಯದಾಯಕ.
ಅಡಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯೂಎಚ್ಒ ವರದಿ ಅಡಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಬೆಳೆಗಾರರ ಹಿತರಕ್ಷಣೆಗೆ ಶ್ರಮಿಸುತ್ತಿರುವ ಕ್ಯಾಂಪ್ಕೊ ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುತ್ತಿದೆ. ಐಎಆರ್ಸಿ ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರುವ ಸಂಶಯ ಮೂಡುತ್ತಿದೆ.
ಪುರಾತನ ಕಾಲದಿಂದಲೂ ಅಡಕೆಯ ಔಷಧೀಯ ಗುಣಗಳ ಬಗ್ಗೆ ಜನಸಾಮಾನ್ಯರಿಗೂ ಅರಿವು ಇದೆ. ಹೀಗಿದ್ದರೂ ಕೂಡ ಡಬ್ಲ್ಯೂಎಚ್ಒ ಅಡಕೆಯ ಉಪಯೋಗದ ಬಗೆಗಿನ ನೈಜ ವರದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದಕ್ಕೆ ಕ್ಯಾಂಪ್ಕೊ ಖಂಡನೆ ವ್ಯಕ್ತಪಡಿಸುತ್ತದೆ.
ಕ್ಯಾನ್ಸರ್ಕಾರಕ ಅಲ್ಲ ಎಂದಿರುವ ವರದಿಗಳು:
ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು, ಅವುಗಳ ವರದಿಗಳೆಲ್ಲಾ ಅಡಕೆ ಕ್ಯಾನ್ಸರ್ ಕಾರಕ ಅಲ್ಲ ಬದಲಾಗಿ ರೋಗವನ್ನು ಶಮನಗೊಳಿಸುವ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ.
1974 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಕುಮಾರಿ ಮತ್ತು ಇತರರು ನಡೆಸಿದ ಅಧ್ಯಯನದಲ್ಲಿ ತಂಬಾಕು ರಹಿತ ಅಡಕೆ ಮತ್ತು ವಿಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್ ಉಂಟಾಗಿರುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಬದಲಾಗಿ ಟ್ಯೂಮರ್ಗಳ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿದೆ.
2016 ರಲ್ಲಿ ವಿನ್ ಶಿಪ್ ಕ್ಯಾನ್ಸರ್ ಇನ್ಸ್ಟಿ ಟ್ಯೂಟ್ ಆಫ್ ಎಮೆರಾಯ್ ಯೂನಿವರ್ಸಿಟಿ, ಅಟ್ಲಾಂಟ (ಅಮೆರಿಕ)ದಲ್ಲಿ 25 ಮಂದಿಯ ತಂಡ ನಡೆಸಿದ ಅಧ್ಯಯನದಲ್ಲಿ ಅಡಿಕೆಯಿಂದ ತೆಗೆದ ಸಾರವು ಹೆಪಟೋಸೆಲ್ಯುಲರ್ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಟ್ಯೂಮರ್ ಬೆಳವಣಿಗೆಯನ್ನು ತಡೆಯುವ ಗುಣಹೊಂದಿದೆ ಎಂಬುದಾಗಿ ವರದಿ ನೀಡಿದೆ.
2022 ರಲ್ಲಿ ನಿಟ್ಟೆ ಯುನಿವರ್ಸಿಟಿ ಸಂಶೋಧನೆ ನಡೆಸಿದೆ. ಅವರ ಅಧ್ಯಯನವೂ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವಾದವನ್ನು ಪುಷ್ಠೀಕರಿಸಿದೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ)ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ವಿ.ಸತ್ಯನಾರಾಯಣ ಹಾಗೂ ಎಆರ್ಡಿಎಫ್ನ ಡಾ. ಕೇಶವ ಭಟ್ ಅವರು ಭೇಟಿ ಮಾಡಿ ಚರ್ಚಿಸಿದಾಗ ICMR ಮತ್ತು ICAR ನಲ್ಲಿ ಸಂಶೋಧನೆ ನಡೆಸಿ ಅಡಕೆ ಕ್ಯಾನ್ಸರ್ ಕಾರಕ ಎಂಬ ವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ.
ಡಬ್ಲ್ಯೂಎಚ್ಒ ನಿಲುವನ್ನು ಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI, ಮೈಸೂರು ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರ್ಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡುವಂತೆ ಕೇಂದ್ರ ಸರ್ಕಾರದಲ್ಲಿ ರೈತರ ಪರವಾಗಿ ಕ್ಯಾಂಪ್ಕೊ ಮನವಿ
ಮಾಡುತ್ತಿದೆ. ಕ್ಯಾಂಪ್ಕೊ ಕಳೆದ ಐದು ದಶಕಗಳಿಂದ ರೈತರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.