ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಯಾರು?

| Published : Dec 15 2023, 01:31 AM IST

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಯಾರು?
Share this Article
  • FB
  • TW
  • Linkdin
  • Email

ಸಾರಾಂಶ

ನ. ೮ರಂದು ಆಯ್ಕೆ, ಪ್ರಕ್ರಿಯೆ ಸಭೆಯಲ್ಲಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿತ್ತು. ಇನ್ನೂ ನ. ೧೮ರಂದು ಮತ್ತೆ ಸಭೆ ಕರೆಯಲಾಗಿತ್ತು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸಭೆ ಕರೆದಿದ್ದರಿಂದ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರು ಬೆಂಗಳೂರಿಗೆ ತೆರಳಿದ್ದರಿಂದ ಕೋರಂ ಕೊರತೆಯಿಂದ ಮತ್ತೆ ಸಭೆ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಡಿ. ೧೫ರಂದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಸಭೆ ಕರೆದಿದ್ದಾರೆ.

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ(ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ಡಿ. ೧೫ರಂದು ಮತ್ತೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ಚುನಾವಣೆ ನಡೆಯಲಿದೆಯೇ ಎಂಬ ಕುತೂಹಲ ಸಹಕಾರಿಗಳಲ್ಲಿ ಮತ್ತೊಮ್ಮೆ ಮನೆಮಾಡಿದೆ.

ನ. ೮ರಂದು ಆಯ್ಕೆ, ಪ್ರಕ್ರಿಯೆ ಸಭೆಯಲ್ಲಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿತ್ತು. ಇನ್ನೂ ನ. ೧೮ರಂದು ಮತ್ತೆ ಸಭೆ ಕರೆಯಲಾಗಿತ್ತು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸಭೆ ಕರೆದಿದ್ದರಿಂದ ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರು ಬೆಂಗಳೂರಿಗೆ ತೆರಳಿದ್ದರಿಂದ ಕೋರಂ ಕೊರತೆಯಿಂದ ಮತ್ತೆ ಸಭೆ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಡಿ. ೧೫ರಂದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಸಭೆ ಕರೆದಿದ್ದಾರೆ.

ಈಗ ಆಯ್ಕೆ ಹೇಗೆ?:

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನ. ೮ರಂದು ಸಿರುಗುಪ್ಪದ ಚೊಕ್ಕ ಬಸವನಗೌಡ ಮತ್ತು ಕೂಡ್ಲಿಗಿಯ ಕೆ. ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕಂಪ್ಲಿಯ ಮೂಕಯ್ಯಸ್ವಾಮಿ ಮತ್ತು ಕೊಟ್ಟೂರಿನ ದಾರುಕೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕೋರಂ ಕೊರತೆಯಿಂದ ಆಯ್ಕೆ ಪ್ರಕ್ರಿಯೆ ಸಭೆ ಎರಡು ಬಾರಿ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಡಿ. ೧೫ರಂದು ಮಧ್ಯಾಹ್ನ ೨ ಗಂಟೆಗೆ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಸಭೆ ಕರೆದಿದ್ದಾರೆ.

ಕೋರಂಗೆ ಬೇಕು ೯ ಸದಸ್ಯರು:

ಬ್ಯಾಂಕ್‌ನ ೧೪ ಚುನಾಯಿತ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು ಮತ್ತು ಅಪೆಕ್ಸ್ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರೊಬ್ಬರು ಚುನಾವಣೆಯಲ್ಲಿ ಮತದಾನ ಮಾಡಬಹುದು. ಕೋರಂಗೆ ೯ ಜನ ಮತದಾರರು ಬೇಕಿದ್ದು, ಈ ಬಾರಿಯೂ ಕೋರಂ ಕೊರತೆ ಉಂಟಾಗಲಿದೆಯೇ ಎಂಬ ಪ್ರಶ್ನೆ ಉಂಟಾಗಿದೆ.

ಒಂದೆಡೆ ಕೆ. ತಿಪ್ಪೇಸ್ವಾಮಿ ಬಣ ಈಗ ೯ ಜನ ಒಟ್ಟಾಗಿ ತಿರುಗಾಡಲಾರಂಭಿಸಿದ್ದಾರೆ. ಚೊಕ್ಕ ಬಸವನಗೌಡ ಬಣವೂ ತೆರೆಮರೆ ಕಸರತ್ತು ನಡೆಸುತ್ತಿದ್ದು, ಯಾರು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಲಿದ್ದಾರೆ ಎಂಬುದು ಇನ್ನೂ ಕುತೂಹಲಕ್ಕೆಡೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಸಲಹೆ:

ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಒಮ್ಮತದಿಂದ ನಡೆಸಲು ಈಗಾಗಲೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸಿಎಂ ಸಿದ್ದರಾಮಯ್ಯನವರು ಸಲಹೆ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಸಹಕಾರ ಸಚಿವರು ಬ್ಯಾಂಕ್‌ನ ನಿರ್ದೇಶಕರ ಸಭೆ ಕೂಡ ನಡೆಸಿದ್ದಾರೆ.