ಸಾರಾಂಶ
ಆರ್ಸಿಬಿ ತಂಡದಲ್ಲಿದ್ದ ವಿದೇಶಿ ಆಟಗಾರರು ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ವಿದೇಶಕ್ಕೆ ತೆರಳುವ ಸಾಧ್ಯತೆಯಿದ್ದ ಕಾರಣ ತರಾತುರಿಯಲ್ಲಿ ವಿಧಾನಸೌಧದ ಮೆಟ್ಟಿಲುಗಳ ಹದಿನೆಂಟು ವರ್ಷದ ಬಳಿಕ ಐಪಿಎಲ್ ಗೆದ್ದ ಆರ್ಸಿಬಿ ತಂಡವನ್ನು ಅಭಿನಂದಿಸುವ ಸಮಾರಂಭ ಆಯೋಜಿಸಲು ಸರ್ಕಾರ ಮುಂದಾಯಿತು ಎಂದು ಮೂಲಗಳು ತಿಳಿಸಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್ಸಿಬಿ ತಂಡದಲ್ಲಿದ್ದ ವಿದೇಶಿ ಆಟಗಾರರು ಹಾಗೂ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ವಿದೇಶಕ್ಕೆ ತೆರಳುವ ಸಾಧ್ಯತೆಯಿದ್ದ ಕಾರಣ ತರಾತುರಿಯಲ್ಲಿ ವಿಧಾನಸೌಧದ ಮೆಟ್ಟಿಲುಗಳ ಹದಿನೆಂಟು ವರ್ಷದ ಬಳಿಕ ಐಪಿಎಲ್ ಗೆದ್ದ ಆರ್ಸಿಬಿ ತಂಡವನ್ನು ಅಭಿನಂದಿಸುವ ಸಮಾರಂಭ ಆಯೋಜಿಸಲು ಸರ್ಕಾರ ಮುಂದಾಯಿತು ಎಂದು ಮೂಲಗಳು ತಿಳಿಸಿವೆ.ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರದ ವತಿಯಿಂದ ಈ ಮಟ್ಟದ ಕಾರ್ಯಕ್ರಮ ಆಯೋಜಿಸುವ ಇರಾದೆ ಇರಲಿಲ್ಲ ಎನ್ನಲಾಗಿದೆ. ಆದರೆ,ಐಪಿಎಲ್ ಕಪ್ ಗೆದ್ದಿದ್ದರಿಂದ ಉತ್ಸಾಹದಲ್ಲಿದ್ದ ಯುವ ಸಮೂಹವನ್ನು ಮೆಚ್ಚಿಸುವ ಹಾಗೂ ಕೊಹ್ಲಿ ಹಾಗೂ ವಿದೇಶಿ ಆಟಗಾರರು ಲಭ್ಯರಾಗುವುದಿಲ್ಲ ಎಂಬ ಕಾರಣಕ್ಕೆ ಸಮಾರಂಭ ಆಯೋಜಿಸಲು ಒಪ್ಪುವಂತೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೈನಲ್ ಪಂದ್ಯದ ಮರು ದಿನವೇ ಸಂಭ್ರಮಾಚಣೆಗೆ ಅವಕಾಶ ನೀಡುವುದು ಬೇಡ. ಜತೆಗೆ ಆರ್ಸಿಬಿ ಒಂದು ಖಾಸಗಿ ಫ್ರಾಂಚೈಸಿ. ಅವರ ರಾಜ್ಯವನ್ನು ಪ್ರತಿನಿಧಿಸುವ ತಂಡವಲ್ಲ. ಹೀಗಾಗಿ ಅವರೇ ಕಾರ್ಯಕ್ರಮ ಮಾಡಿಕೊಳ್ಳಲಿ. ವಿಧಾನಸೌಧದ ಬಳಿಕ ಸರ್ಕಾರದಿಂದ ಕಾರ್ಯಕ್ರಮ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ.ಆದರೆ, 18 ವರ್ಷದ ಬಳಿಕ ಆರ್ಸಿಬಿ ಕಪ್ ಗೆದ್ದಿದೆ. ಜನರು ತುಂಬಾ ಉತ್ಸಾಹದಲ್ಲಿದ್ದು ವಿಶೇಷವಾಗಿ ಯುವ ಜನರನ್ನು ಆಕರ್ಷಿಸಲು ಇದು ಸುಸಂದರ್ಭ. ಅವರನ್ನು ನಮ್ಮತ್ತ ಸೆಳೆಯಲು ಹಾಗೂ ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡುವಂತೆ ಮಾಡಲು ಕಾರ್ಯಕ್ರಮ ಅಗತ್ಯ ಎಂದು ಮನವೊಲಿಕೆ ಪ್ರಯತ್ನ ನಡೆಯಿತು ಎನ್ನಲಾಗಿದೆ.
ಇದಕ್ಕೆ ಸಿದ್ದರಾಮಯ್ಯ ಅವರು, ಸನ್ಮಾನ ಹಾಗೂ ಸಂಭ್ರಮಾಚರಣೆ ಮಾಡಲೇಬೇಕು ಎಂದರೆ ಎಲ್ಲಾ ಸಿದ್ಧತೆ ಮಾಡಿಕೊಂಡು ಮೂರು ದಿನ ಬಿಟ್ಟು ಮಾಡೋಣ ಎಂದು ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ವಿರಾಟ್ ಕೊಹ್ಲಿ ಅವರು ಲಂಡನ್ಗೆ ತೆರಳುತ್ತಾರೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟನ್, ರೊಮಾರಿಯೋ ಶೆಫರ್ಡ್, ಜೋಶ್ ಹೇಜಲ್ವುಡ್ ಎಲ್ಲಾ ವಿದೇಶಿ ಆಟಗಾರರು ಅವರ ತವರು ದೇಶಗಳಿಗೆ ಮರಳುತ್ತಾರೆ. ಹೀಗಾಗಿ ಬುಧವಾರವೇ ಸಂಭ್ರಮಾಚರಣೆ ಏರ್ಪಡಿಸಬೇಕು ಎಂದು ಹೇಳಿ ಅವರ ಮನವೊಲಿಸಲಾಯಿತು ಎಂದು ಹೇಳಲಾಗುತ್ತಿದೆ.ಈ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ವೃತ್ತಿ ಜೀವನದ ಅತಿ ದೊಡ್ಡ ಕಪ್ಪು ಚುಕ್ಕೆ ಎಂದು ಸಂಪುಟ ಸದಸ್ಯರೊಂದಿಗೆ ದುಃಖ ತೋಡಿಕೊಂಡರು ಎಂದು ತಿಳಿದುಬಂದಿದೆ.