ಸಾರಾಂಶ
- ಒಳಮೀಸಲಾತಿ ನ್ಯಾಯ ಕೇಳೋದೇ ತಪ್ಪಾ?: ಸರ್ಕಾರ, ಪೊಲೀಸ್ ಇಲಾಖೆಗೆ ಹೆಗ್ಗೆರೆ ರಂಗಪ್ಪ ಪ್ರಶ್ನೆ ।
- ಕಲ್ಲು ತೂರಲು ಪ್ರಯತ್ನಿಸಿದವರನ್ನು ಪೊಲೀಸ್ ಇಲಾಖೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ - - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೈಸೂರಿನ ಚಾಮುಂಡಿ ಬೆಟ್ಟದಿಂದ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ರಥಯಾತ್ರೆಗೆ ಅಡ್ಡಿಪಡಿಸಿ, ಹೋರಾಟಗಾರರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರದ ಉಪ ವಿಭಾಗಾಧಿಕಾರಿ ಕಚೇರಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಘೋಷಣೆ ಕೂಗುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಮೈಸೂರಿನಲ್ಲಿ ಚಾಮುಂಡಿ ಬೆಟ್ಟದಿಂದ ಸಮಿತಿ ಮುಖಂಡರ ನೇತೃತ್ವದಲ್ಲಿ ಅರೆಬೆತ್ತಲೆಯಾಗಿ ಶಾಂತಿಯುತ ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಮೇ 25ರಂದು ಪೊಲೀಸರು ಬಂಧಿಸಿದ್ದಾರೆ. ಹೋರಾಟಗಾರರು ಕಾನೂನು ಉಲ್ಲಂಘಿಸಿದ್ದಲ್ಲಿ ಬಂಧಿಸಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ. ಆದರೆ, ಶಾಂತಿಯುತವಾಗಿ ಪಾದಯಾತ್ರೆ ನಡೆಸಿದ ಹೋರಾಟಗಾರರನ್ನು ಬಂಧಿಸಿದ್ದು ಖಂಡನೀಯ ಎಂದರು.ಧರಣಿ ವೇಳೆ ನಾಲ್ಕಾರು ಜನ ಕಲ್ಲು ತೂರಲು ಪ್ರಯತ್ನಿಸಿದ್ದಾರೆ. ಅಂಥವರನ್ನು ಕಾನೂನು ಪ್ರಕಾರ ಬಂಧಿಸುವ ಬದಲು, ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ನಮ್ಮ ಸಮುದಾಯದ ಮುಖಂಡರನ್ನು ಬಂಧಿಸಲಾಯಿತು ಎಂಬುದಕ್ಕೆ ಪೊಲೀಸ್ ಇಲಾಖೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಶಾಂತಿಯುತ ಅರೆಬೆತ್ತಲೆ ಮೆರವಣಿಗೆಯಲ್ಲಿ ಮೈಸೂರಿಗೆ ಹೋಗುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕ್ರಾಂತಿಕಾರಿ ರಥಯಾತ್ರೆಗೆ ಕೆಲವರು ವಿರೋಧಿಸುತ್ತಿದ್ದಾರೆಂಬ ಕಾರಣ ನೀಡಿ, ಬಂಧಿಸಲಾಗಿದೆ ಎತ್ತಾರೆಯೇ ಹೊರತು, ನಿಖರ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡುತ್ತಿಲ್ಲ. ಮಾದಿಗ ಹೋರಾಟಕ್ಕೆ ಅಡ್ಡಿಪಡಿಸಲು ಯತ್ನಿಸಿದ ಆ ನಾಲ್ವರು ಯಾರೆಂಬುದನ್ನು ಪತ್ತೆ ಮಾಡಿ, ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಬಡ್ತಿ ಮೀಸಲಾತಿ ತಡೆ ಮಾಡಬೇಕು ತುಳಿತಕ್ಕೊಳಗಾದ ಮಾದಿಗ ಸಮಾಜಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಮಾದಿಗರ ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸವನ್ನು ಯಾರೂ ಸಹಿತ ಮಾಡಬಾರದು. ನಮ್ಮ ಸಮುದಾಯದ ಹೋರಾಟವನ್ನು ದಮನ ಮಾಡಲು ಯತ್ನಿಸಿದರೆ ಜೂ.9ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದ ಐತಿಹಾಸಿಕ, ಬೃಹತ್ ಸಮಾವೇಶದ ಮೂಲಕ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು. ಸಮಿತಿ ಕ್ರಾಂತಿಕಾರಿ ರಥಯಾತ್ರೆ ಮುಗಿಯುವವರೆಗೂ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ, ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಹೆಗ್ಗೆರೆ ರಂಗಪ್ಪ ಒತ್ತಾಯಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಸಿ.ಬಸವರಾಜ, ಮುಖಂಡರಾದ ಜಿಡಿಎಸ್ ದುಗ್ಗಪ್ಪ, ಎಚ್.ಡಿ.ಉದಯಪ್ರಕಾಶ, ಡಿ.ನಾಗರಾಜ, ಕೆ.ಸಿ. ನಿರಂಜನಮೂರ್ತಿ, ಬಿ.ಮಂಜುನಾಥ, ಕೆ.ಕಿರಣ, ಮಾದಿಗ ಹನುಮಂತಪ್ಪ, ಅಂಜಿನಪ್ಪ, ಸಂತೋಷ, ಕೆ.ಮಂಜುನಾಥ, ಜಿಗಳಿ ಹಾಲೇಶ, ಸದಾನಂದ ಚಿಕ್ಕನಹಳ್ಳಿ, ಬಿ.ಮಂಜುನಾಥ ಇತರರು ಇದ್ದರು.- - -
(ಕೋಟ್) ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೀದಿಗಿಳಿದು ಹೋರಾಟ ನಡೆಸಿದರೆ ಬಂಧಿಸುವುದಾಗಿ ಪೊಲೀಸ್ ಇಲಾಖೆ ಹೇಳುತ್ತಿದೆ. ಟ್ರಾಫಿಕ್ ಸಮಸ್ಯೆ ಮೈಸೂರಿನಲ್ಲಿ ಆಗುತ್ತದೆಂಬ ನೆಪವೊಡ್ಡಿ, ಕ್ರಾಂತಿಕಾರಿ ರಥಯಾತ್ರೆಯಲ್ಲಿದ್ದವರನ್ನು ಕಾರಣವೇ ಇಲ್ಲದೇ ಪೊಲೀಸರು ಬಂಧಿಸಿದ್ದು ಸರಿಯಲ್ಲ. ನಮ್ಮ ಸಂಘಟನೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರನ್ನು ಪೊಲೀಸರು ಮೈ-ಕೈ ಮುಟ್ಟಿ, ಎಳೆದಾಡಿ ಬಂಧಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.- ಹೆಗ್ಗೆರೆ ರಂಗಪ್ಪ, ಜಿಲ್ಲಾ ಮುಖಂಡ
- - --(ಫೋಟೋ ಇದೆ)
-27ಕೆಡಿವಿಜಿ1.ಜೆಪಿಜಿ:ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ದಾವಣಗೆರೆ ಉಪವಿಭಾಗಾಧಿಕಾರಿಗೆ ಮನವಿ ಅರ್ಪಿಸಲಾಯಿತು.