ಕನ್ನಡಪ್ರಭ ವಾರ್ತೆ ಕಾಪು

ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಪತಿಯ ಲಾಕರ್‌ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿರುವ ಘಟನೆ ನಡೆದಿದೆ.ಉಚ್ಚಿಲ ಗ್ರಾಮದ ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ. ಇವರು 2016ರಲ್ಲಿ ವನಿತಾ ಎಂಬವರೊಂದಿಗೆ ವಿವಾಹವಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸುತ್ತಿದ್ದರು.ಕಿರಣ್ ಕುಮಾರ್ ತಮ್ಮ ಅಗತ್ಯ ದಾಖಲಾತಿಗಳು ಹಾಗೂ ಚಿನ್ನಾಭರಣಗಳನ್ನು ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಯ ಲಾಕರ್‌ ನಲ್ಲಿರಿಸಿದ್ದರು ಮತ್ತು ಅದರ ಕೀಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಏ. 10ರಂದು ಕಿರಣ್ ಕುಮಾರ್ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಮನೆಯ ಅಲ್ಮಾರಿಯ ಕೀ ಎಲ್ಲೋ ಬಿಸಾಡಿ ಹೋಗಿದೆ ಎಂದು ಹೇಳಿ ಕೀ ಮೇಕರ್‌ರೊಬ್ಬರನ್ನು ಕರೆಸಿ ಅಲ್ಮಾರಿಯ ನಕಲಿ ಕೀ ತಯಾರಿಸಿಕೊಂಡು, ಆ ಕೀಯಿಂದ ಅಲ್ಮಾರಿ ತರೆದು ಅದರೊಳಗಿದ್ದ ಬ್ಯಾಂಕಿನ ಲಾಕರ್‌ನ ಕೀ ಕಳವು ಮಾಡಿದ್ದಾರೆ. ನಂತರ ಆ ಕೀಯನ್ನು ಬಳಸಿ ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಗೆ ತೆರಳಿ ಲಾಕರ್ ತೆರೆದು, ಸುಮಾರು 169 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ 23.67 ಲಕ್ಷ ರು.) ಕಳವು ಮಾಡಿದ್ದಾರೆ ಎಂದು ಕಿರಣ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.