ಸಾರಾಂಶ
ಕುಶಾಲನಗರ ತಾಲೂಕು ಮಾಲ್ದಾರೆ ಮೀಸಲು ಅರಣ್ಯದ ವಾಲನೂರು ತ್ಯಾಗತ್ತೂರು ವ್ಯಾಪ್ತಿಯ ಕಾಡಿನಲ್ಲಿ ಗುಂಡು ಹಾರಿಸಿ ಎರಡು ಕಾಡು ಕೋಣಗಳನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಕುಶಾಲನಗರ : ಕುಶಾಲನಗರ ತಾಲೂಕು ಮಾಲ್ದಾರೆ ಮೀಸಲು ಅರಣ್ಯದ ವಾಲನೂರು ತ್ಯಾಗತೂರು ವ್ಯಾಪ್ತಿಯ ಕಾಡಿನಲ್ಲಿ ಗುಂಡು ಹಾರಿಸಿ ಎರಡು ಕಾಡುಕೋಣಗಳನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೀಸಲು ಅರಣ್ಯದ ವ್ಯಾಪ್ತಿಯ ಅವರೆಗುಂದದಲ್ಲಿ ಘಟನೆ ನಡೆದಿದೆ. ಕೆಲವು ದುಷ್ಕರ್ಮಿಗಳು ರಾತ್ರಿ ವೇಳೆಗೆ ಗುಂಡು ಹಾರಿಸಿದ ಶಬ್ಧ ಕೇಳಿ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.
ಎರಡು ಕಾಡುಕೋಣಗಳು ಸ್ಥಳದಲ್ಲೇ ಬಿದ್ದು ಮೃತಪಟ್ಟ ದೃಶ್ಯ ಕಂಡು ಬಂದಿದ್ದು, ಅರಣ್ಯ ಅಧಿಕಾರಿಗಳು ಮಹಜರು ನಡೆಸಿ ನಂತರ ವನ್ಯಜೀವಿ ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳ ಸುಳಿವು ದೊರೆತಿದ್ದು ಈ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ರತನ್ ಕುಮಾರ್ ತಿಳಿಸಿದ್ದಾರೆ.