ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿ ಗ್ರಾಮದ ಖಾಸಗಿ ತೋಟದ ಕರೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು ನರಳುತ್ತಿದ್ದ 35 ವರ್ಷದ ಕಾಡಾನೆ ಕೊನೆಗೂ ಕಾಡು ಸೇರಿದೆ.

ಕನ್ನಡಪ್ರಭವಾರ್ತೆ ಮಡಿಕೇರಿ

ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿ ಗ್ರಾಮದ ಖಾಸಗಿ ತೋಟದ ಕರೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು ನರಳುತ್ತಿದ್ದ 35 ವರ್ಷದ ಕಾಡಾನೆ ಕೊನೆಗೂ ಕಾಡು ಸೇರಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿ (ದೇವರಪುರ ವ್ಯಾಪ್ತಿಯ) ಕೆರೆಯಲ್ಲಿ ಕಾಡಾನೆಯೊಂದು ಸಿಲುಕಿಕೊಂಡು ನರಳಾಡುತ್ತಿತ್ತು. ಕೆಸರು ಮತ್ತು ನೀರಿನ ಆಳದಿಂದಾಗಿ ಆನೆಯು ದಡ ಸೇರಲಾಗದೆ ಸುಮಾರು ೨೪ ಗಂಟೆಗಳಿಗೂ ಹೆಚ್ಚು ಕಾಲ ಪರದಾಡುತ್ತಿತ್ತು. ಘಟನೆ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಕಾರ್ಯಾಚಾರಣೆ ನಡೆಸಲು ವಿಳಂಬ ಮಾಡಿದ್ದಕ್ಕಾಗಿ ಇಲಾಖೆ ವಿರುದ್ಧಜನ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಆನೆಯ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಿರುಬನಾಥ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯ ಆರ್‌ಎಫ್‌ಒ ಗಂಗಾಧ‌ರ್, ವನ್ಯಜೀವಿ ಆರ್‌ಎಫ್‌ಒ ದೇವರಾಜ್ ಹಾಗೂ ಡಿಆರ್‌ಎಫ್‌ಒ ಪ್ರಶಾಂತ್ ಸ್ಥಳದಲ್ಲಿದ್ದು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದರು.

ವನ್ಯಜೀವಿ ತಜ್ಞ ಡಾ. ಮುಜೀಬ್ ಅವರು ಆನೆಯ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಪ್ರಾಣಿಗೆ ಯಾವುದೇ ಗಂಭೀರ ಗಾಯ ಅಥವಾ ತುರ್ತು ಚಿಕಿತ್ಸೆಯ ಅಗತ್ಯ ಕಂಡುಬರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮುಂದಾಗದೆ ಆನೆಯನ್ನು ಕಾಡಿಗಟ್ಟಿ ನಿರಂತರ ನಿಗಾದಲ್ಲಿ ಇಡಲು ಅಧಿಕಾರಿಗಳು ತೀರ್ಮಾನಿಸಿ ಕಾರ್ಯಾಚರಣೆ ಕೈಗೊಂಡು ಆನೆಯನ್ನು ಕಾಡಿಗಟ್ಟಿದರು.ಸಹಜ ಪ್ರಕ್ರಿಯೆ: ಕಾಡು ಪ್ರಾಣಿಗಳಲ್ಲಿ ವಯಸ್ಸು, ಜೀರ್ಣಾಂಗದ ತೊಂದರೆ ಅಥವಾ ಹಸಿವಿನಂತಹ ಕಾರಣಗಳಿಂದ ಕೆಲವೊಮ್ಮೆ ಒಂದೆರಡು ದಿನಗಳ ಕಾಲ ಸುಸ್ತಾಗಿ ಒಂದೇ ಸ್ಥಳದಲ್ಲಿ ಉಳಿಯುವುದು ಸಹಜ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಬಳಿಕ ಅವು ಸ್ವಾಭಾವಿಕವಾಗಿ ತಮ್ಮ ವಾಸಸ್ಥಳದತ್ತ ತೆರಳುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.