ವನ್ಯಪ್ರಾಣಿ ಬೇಟೆ ಪ್ರಕರಣ ದಾಖಲು: ಮೂವರ ಬಂಧನ

| Published : Jun 20 2025, 12:34 AM IST

ಸಾರಾಂಶ

Wildlife poaching case registered: Three arrested

-ದೋರನಹಳ್ಳಿಯಲ್ಲಿ ಅಕ್ರಮವಾಗಿ ವನ್ಯಪ್ರಾಣಿ ನರಿ ಕೊಂದ ಆರೋಪದಡಿ ಬಂಧನ

------

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನ ದೋರನಹಳ್ಳಿ ಗ್ರಾಮದ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಪಕ್ಕದ ಅಡವಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಂದಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಈ ಸಮಯದಲ್ಲಿ ಗುಂಪಿನಲ್ಲಿದ್ದ ಮೂರು ಜನರನ್ನು ಸೆರೆ ಹಿಡಿಯಲಾಗಿದೆ. ಅಕ್ರಮವಾಗಿ ನರಿಯನ್ನು ಬೇಟೆಯಾಡಿ ಅದನ್ನು ಕೊಂದ ಆರೋಪಿಗಳಾದ ಮರೆಪ್ಪ ಜಂಬಯ್ಯ (48), ಯಲ್ಲಪ್ಪ ಜಂಬಯ್ಯ (55), ಶೇಖಪ್ಪ ಸಾಯಬಣ್ಣ ದೋರನಹಳ್ಳಿ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಸುರಪುರ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಬೇಟೆಗಾರರು ಕಾಡುಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮಾಂಸ ಮತ್ತು ಚರ್ಮವನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ಶಂಕಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಪ್ರಿಯದರ್ಶಿನಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ರಾಹುಲ್ ಚಹ್ವಾಣ ತಿಳಿಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಕಾಶಪ್ಪ, ಗಸ್ತು ಅರಣ್ಯ ಪಾಲಕ ದಾಳಿಯಲ್ಲಿ ಭಾಗವಹಿಸಿದ್ದರು.

-----

19ವೈಡಿಆರ್5: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವನ್ಯಪ್ರಾಣಿ ನರಿಯನ್ನು ಕೊಂದಿರುವ ಆರೋಪದಡಿ ಮೂವರು ಬೇಟೆಗಾರರನ್ನು ಪೊಲೀಸರು ಬಂಧಿಸಿರುವುದು.