ಸಾರಾಂಶ
ರಾಜ್ಯದಲ್ಲಿ ಗೃಹ ಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ಅವರ ಮೇಲೆ ಇಡಿ ದಾಳಿ ಮಾಡುವುದರ ಮೂಲಕ ಒಬ್ಬ ದಲಿತ ನಾಯಕನ ಶಕ್ತಿಯನ್ನು ಕುಂದಿಸುವ ಕೆಲಸವನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ರಾಜ್ಯದಲ್ಲಿ ಜನರಿಂದ ಮತ ಪಡೆದು ಆಯ್ಕೆಯಾಗುವುದರ ಮೂಲಕ ಶಾಸಕರಾಗಿ, ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳನ್ನು ಕೆಲವು ಬಿಜೆಪಿ ನಾಯಕರು ಹಾಗೂ ಮನುವಾದಿಗಳು ಅಸಂವಿಧಾನಿಕ ಪದಗಳಿಂದ ನಿಂದಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ದಲಿತ ಸಂಘರ್ಷ ಸಮಿತಿ ಕರ್ನಾಟಕ ವತಿಯಿಂದ ರಾಜ್ಯದ ದಲಿತ ಕೇರಿಗಳಿಂದ ಹೋರಾಟ ಮಾಡಲಾಗುವುದು ಎಂದು ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ, ಆರ್.ಬಿ. ತಿಮ್ಮಾಪುರ, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವಾರು ದಲಿತ ನಾಯಕರ ಬಗ್ಗೆ ಕೆಲವು ಬಿಜೆಪಿ ನಾಯಕರು ಹಾಗೂ ಮನುವಾದಿಗಳು ವಾಗ್ದಾಳಿ ಮಾಡುವ ಸಂದರ್ಭದಲ್ಲಿ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಅಗೌರವ ತರುವುದರ ಜೊತೆಗೆ ಪರೋಕ್ಷವಾಗಿ ಸಮುದಾಯವನ್ನು ಹಿಯಾಳಿಸುವ ಕೆಲಸ ಮಾಡಿದಂತಾಗುತ್ತದೆ ಎಂದರು.ಇನ್ನು ರಾಜ್ಯದಲ್ಲಿ ಗೃಹ ಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ಅವರ ಮೇಲೆ ಇಡಿ ದಾಳಿ ಮಾಡುವುದರ ಮೂಲಕ ಒಬ್ಬ ದಲಿತ ನಾಯಕನ ಶಕ್ತಿಯನ್ನು ಕುಂದಿಸುವ ಕೆಲಸವನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಜನಗಣತಿ ನಡೆಯುತ್ತಿರುವ ವೇಳೆ ಈ ರೀತಿ ಕೆಲವು ಬಿಜೆಪಿ ನಾಯಕರು ಹಾಗೂ ಮನುವಾದಿಳು ದಲಿತ ಸಚಿವರ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವುದು ಸಮುದಾಯದವರ ಮನಸ್ಸಿಗೆ ನೋವುಂಟು ಮಾಡುವಂತೆ ಆಗಿದೆ ಎಂದರು.